ಹನುಮಸಾಗರ: ಗ್ರಾಮಾಂತರ ಪ್ರದೇಶದಲ್ಲಿ ಸಾಕಷ್ಟು ನೈಸರ್ಗಿಕ ಸಂಪತ್ತು ಇದೆ ಜೊತೆಗೆ ದುಡಿಯುವ ಹಂಬಲ ಹೊಂದಿದ ಶ್ರಮಿಕರು ಇದ್ದಾರೆ, ಆದರೆ ಸರಿಯಾದ ಮಾರ್ಗದರ್ಶನದ ಕೊರತೆಯಿಂದ ಗ್ರಾಮೀಣರು ಅಭಿವೃದ್ಧಿಯಾಗಲು ಸಾಧ್ಯವಾಗುತ್ತಿಲ್ಲ ಎಂದು ಮುಖಂಡ ಎಂ.ಆರ್.ಪಾಟೀಲ ಅಭಿಪ್ರಾಯಪಟ್ಟರು.
ಸೋಮವಾರ ಸಮೀಪದ ಹೂಲಗೇರಾ ಗ್ರಾಮದ ಗುಂಡಮಲ್ಲೇಶ್ವರ ಮಂಗಲ ಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ನಡೆದ ಸ್ವಸಹಾಯ ಸಂಘಗಳ ನೂತನ ಒಕ್ಕೂಟಗಳನ್ನು ಉದ್ಘಾಟಿಸಿ ಮಾತನಾಡಿದರು.
ಹಳ್ಳಿಗರು ಕೆಲಸ ಮಾಡುವ ಸ್ಥಳಕ್ಕೆ ಬಂದು ಅವರ ಕೌಶಲಕ್ಕೆ ಪೂರಕವಾಗುವಂತಹ ಯೋಜನೆಗಳನ್ನು ಹಾಕಿಕೊಂಡು, ಹಳ್ಳಿಗರ ಜೀವನಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಕಿಕೊಂಡಿರುವುದು ಶ್ಲಾಘನೀಯವಾದುದು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪ್ರಕಾಶ ರಾಠೋಡ ಮಾತನಾಡಿ, ಉದ್ಯೋಗ ಮಾಡುವ ಲವಲವಿಕೆ ಹೊಂದಿರುವವರಿಗೆ ಸದ್ಯ ಸಾಕಷ್ಟು ಯೋಜನೆಗಳಿವೆ, ಸಾಕಷ್ಟು ಅನುದಾನವೂ ದೊರಕುತ್ತದೆ, ಅದಕ್ಕೆ ಪೂರಕವಾಗಿ ಹಲವಾರು ಸಂಘ ಸಂಸ್ಥೆಗಳು ಸ್ವಸಹಾಯ ಸಂಘಗಳನ್ನು ರಚಿಸಿ ಕೃಷಿ, ಹೈನುಗಾರಿಕೆ, ಕೋಳಿ, ಕುರಿಸಾಕಾಣಿಕೆಯಂತಹ ಉಪಕಸುಬುಗಳನ್ನು ಹಚ್ಚುವುದರ ಜೊತೆಗೆ ತರಬೇತಿ, ಹಣಕಾಸಿನ ನೆರವು ಸಹ ನೀಡುತ್ತಿವೆ ಸಾರ್ಜನಿಕರು ಇದರ ಸದುಪಯೋಗಪಡಿಸಕೊಳ್ಳಬೇಕೆಂದು ಕರೆ ನೀಡಿದರು.
ಸಂಸ್ಥೆಯ ಯೋಜನಾಧಿಕಾರಿ ಸದಾಶಿವಗೌಡ, ತಮ್ಮ ಸಂಸ್ಥೆ ಹಾಕಿಕೊಂಡಿರುವ ಕಾರ್ಯಕ್ರಮಗಳು ಅದರ ಲಾಭ ಕುರಿತಾಗಿ ಮಾತನಾಡಿದರು. ಚಳಗೇರಿಯ ವಿರೂಪಾಕ್ಷಲಿಂಗ ಶಿವಾಚಾರ್ಯರು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಹೂಲಗೇರಾ, ಮನ್ನೇರಾಳ, ಕಾಟಾಪುರ, ಕಬ್ಬರಗಿ ಕಾರ್ಯಕ್ಷೇತ್ರಗಳಲ್ಲಿ ನೂತನವಾಗಿ ಸಂಘಟಸಲ್ಪಟ್ಟಿರುವ ಪ್ರಗತಿಬಂಧು ಸ್ವಸಹಾಯ ಸಂಘಗಳು ಉದ್ಘಾಟನೆಗೊಂಡವು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಹೊರಪೇಟಿ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಪಂಚಾಯಿತಿ ಸದಸ್ಯೆ ಕವಿತಾ ಪಾಟೀಲ, ವಿರೂಪಾಕ್ಷಗೌಡ ಪಾಟೀಲ, ಕಮಲಪ್ಪ ಜಾಲಿಹಾಳ, ಮುತ್ತಣ್ಣ ಕರಡಿ ಸೇರಿದಂತೆ ಹೂಲಗೇರಾ, ಮನ್ನೇರಾಳ, ಕಾಟಾಪೂರ, ಕಬ್ಬರಗಿ ಗ್ರಾಮಗಳ ಸೇವಾ ಪ್ರತಿನಿಧಿಗಳು ಇದ್ದರು. ಸಂಸ್ಥೆಯ ಮೇಲ್ವಿಚಾರಕ ದೇವೇಂದ್ರ ಎಂ.ಎಚ್ ಸ್ವಾಗತಿಸಿದರು. ಆಂತರಿಕ ಲೆಕ್ಕ ಪರಿಶೋಧಕ ಸಂತೋಷ ಪಿ.ಟಿ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.