ಮುಂಬೈ (ಪಿಟಿಐ): ಮಹಾರಾಷ್ಟ್ರದ ಅಂಕಿತ್ ಚವಾಣ್ ಸ್ಪಾಟ್ ಫಿಕ್ಸಿಂಗ್ನಲ್ಲಿ ಭಾಗಿಯಾಗಿ ಆಜೀವ ನಿಷೇಧ ಶಿಕ್ಷೆಗೆ ಗುರಿಯಾಗಿರುವ ಹಿನ್ನೆಲೆಯಲ್ಲಿ ‘ಇದು ಮುಂಬೈ ಕ್ರಿಕೆಟ್ ಪಾಲಿಗೆ ಅತ್ಯಂತ ಕೆಟ್ಟ ದಿನ’ ಎಂದು ಮುಂಬೈ ಕ್ರಿಕೆಟ್ ಸಂಸ್ಥೆಯ ಜಂಟಿ ಕಾರ್ಯದರ್ಶಿ ನಿತಿನ್ ದಲಾಲ್ ಬೇಸರ ವ್ಯಕ್ತಪಡಿಸಿದ್ದಾರೆ.
‘ಅಂಕಿತ್ ಅತ್ಯುತ್ತಮ ಬೌಲರ್ ಆಗಿದ್ದ. ಆತ ನಿಷೇಧಕ್ಕೆ ಗುರಿಯಾಗಿರುವುದು ಬೇಸರ ಮೂಡಿಸಿದೆ. ಆದರೆ, 20 ವರ್ಷದ ಹರ್ಮಿತ್ ಸಿಂಗ್ ಕಳಂಕ ಮುಕ್ತವಾಗಿವುದು ಸಮಾಧಾನ ನೀಡಿದೆ’ ಎಂದು ನಿತಿನ್ ಹೇಳಿದರು.
ಬಿಸಿಸಿಐ ಹರ್ಮಿತ್ಗೆ ‘ಕ್ಲೀನ್ ಚಿಟ್’ ನೀಡಿರುವುದಕ್ಕೆ ಅವರ ಅಜ್ಜಿ ಪ್ರೀತಮ್ ಕೌರ್ ಸಂತಸ ವ್ಯಕ್ತಪಡಿಸಿದ್ದಾರೆ. ಶಿಸ್ತು ಸಮಿತಿಯ ನಿರ್ಧಾರದ ಬಗ್ಗೆ ಆತಂಕ ಹೊಂದಿದ್ದ ಹರ್ಮಿತ್ ಕುಟುಂಬದವರು ಶುಕ್ರವಾರ ನವದೆಹಲಿಯಲ್ಲಿ ಬೀಡು ಬಿಟ್ಟಿದ್ದರು. ಅಂಕಿತ್ 18 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದು, 53 ವಿಕೆಟ್ಗಳನ್ನು ಪಡೆದಿದ್ದಾರೆ. ಹರ್ಮಿತ್ ಐದು ಪಂದ್ಯಗಳನ್ನು ಆಡಿದ್ದಾರೆ.