ಬೆಂಗಳೂರು: 2004–05ನೇ ಸಾಲಿನಿಂದ ಉಳಿಸಿಕೊಂಡಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಬಾಕಿ ಶುಲ್ಕ 131.52 ಕೋಟಿಯನ್ನು ಪಾವತಿಸಲು ಸರ್ಕಾರ ನಿರ್ಧರಿಸಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ತಿಳಿಸಿದರು.
ಸರ್ಕಾರದ ಈ ನಿರ್ಧಾರದಿಂದ 2.25 ಲಕ್ಷ ವಿದ್ಯಾರ್ಥಿಗಳು ಪ್ರಯೋಜನ ಪಡೆಯಲಿದ್ದಾರೆ. ಶುಲ್ಕ ಬಾಕಿ ಪಾವತಿಸಲು ಎಲ್ಲ ಜಿಲ್ಲೆಗಳಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಹಣ ಬಿಡುಗಡೆ ಮಾಡಲಾಗಿದೆ ಎಂದು ಶನಿವಾರ ತಿಳಿಸಿದರು.
ವ್ಯಾಸಂಗ ಪೂರ್ಣಗೊಳಿಸಿ, ಕಾಲೇಜು ಬಿಟ್ಟಿರುವ ವಿದ್ಯಾರ್ಥಿಗಳು ಸಹ ಆಯಾ ಕಾಲೇಜುಗಳನ್ನು ಸಂಪರ್ಕಿಸಿ ಬಾಕಿ ಶುಲ್ಕವನ್ನು ಪಡೆದುಕೊಳ್ಳಬಹುದು. ಈ ಮೊತ್ತವನ್ನು ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗಳಿಗೆ ಪಾವತಿಸಲಾಗುವುದು ಎಂದರು.
‘ವಿದ್ಯಾಸಿರಿ’ ವಿಸ್ತರಣೆ: ಅಲೆಮಾರಿ ಮತ್ತು ಅರೆಅಲೆಮಾರಿ ಜನಾಂಗದ ವಿದ್ಯಾರ್ಥಿಗಳಿಗೂ ‘ವಿದ್ಯಾಸಿರಿ’ ವಿಸ್ತರಿಸಲು ನಿರ್ಧರಿಸಲಾಗಿದೆ. ಈ ಸಮುದಾಯದ ಮಕ್ಕಳಿಗೆ ಭೋಜನ ಮತ್ತು ವಸತಿ ವೆಚ್ಚಕ್ಕಾಗಿ ತಿಂಗಳಿಗೆ ಕೇವಲ ₨200 ನೀಡಲಾಗುತ್ತಿತ್ತು. ಮುಖ್ಯಮಂತ್ರಿ ಅವರು, ಈ ಮೊತ್ತವನ್ನು ಮಾಸಿಕ ₨ 1500ಕ್ಕೆ ಹೆಚ್ಚಿಸಲು ಆದೇಶ ನೀಡಿದ್ದಾರೆ. ಇದರಿಂದ ಶೇ.750ರಷ್ಟು ಹೆಚ್ಚಳವನ್ನು ಒಂದೇ ಬಾರಿಗೆ ಮಾಡಿದಂತಾಗಿದೆ ಎಂದು ಸಚಿವ ಆಂಜನೇಯ ತಿಳಿಸಿದರು.