ನವದೆಹಲಿ: ಏರ್ ಇಂಡಿಯಾ ಸಂಸ್ಥೆಯ ಷೇರು ವಿಕ್ರಯ ಮತ್ತು ಸ್ವಯಂ ನಿವೃತ್ತಿ ಯೋಜನೆಗೆ ನೌಕರರ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿದೆ. ಹೀಗಾಗಿ ನೌಕರರಿಗೆ ಸರ್ಕಾರಿ ಸ್ವಾಮ್ಯದ ಬೇರೆ ಸಂಸ್ಥೆಗಳಲ್ಲಿ ಕೆಲಸ ಕೊಡಿಸಲು ಇರುವ ಸಾಧ್ಯತೆಗಳ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ.
ನಷ್ಟದಲ್ಲಿರುವ ಸಂಸ್ಥೆಯ ಬಲವರ್ಧನೆಗಾಗಿ ಶೇ 49 ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆ ಮಾಡಲು ಅವಕಾಶ ನೀಡಲಾಗಿದೆ. ಹೀಗಾಗಿ ಷೇರು ವಿಕ್ರಯ ಪ್ರಕ್ರಿಯೆ ಸರಳಗೊಳಿಸುವ ಸಿದ್ಧತೆ ನಡೆಯುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ಸಿಬ್ಬಂದಿ ಹಿತರಕ್ಷಣೆ ಕಾಯ್ದುಕೊಳ್ಳಲು ಹಲವು ಆಯ್ಕೆಗಳನ್ನು ಪರಿಗಣಿಸಲಾಗುತ್ತಿದೆ’ ಎಂದು ನಾಗರೀಕ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ ಆರ್.ಎನ್. ಚೌಬೆ ತಿಳಿಸಿದ್ದಾರೆ.
ಸಂಸ್ಥೆಯು ₹ 59,000 ಕೋಟಿ ಸಾಲ ಬಾಕಿ ಉಳಿಸಿಕೊಂಡಿದೆ. ಷೇರುವಿಕ್ರಯದ ಮೂಲಕ ಸಂಸ್ಥೆಯ ಪುನಶ್ಚೇತನ ಮಾಡಲು ನಿರ್ಧರಿಸಲಾಗಿದೆ. ಗುತ್ತಿಗೆ ನೌಕರರನ್ನೂ ಒಳಗೊಂಡು ಏರ್ ಇಂಡಿಯಾ ಮತ್ತು ಅದರ ಅಂಗಸಂಸ್ಥೆಗಳಲ್ಲಿ ಒಟ್ಟಾರೆ 29,000 ಸಿಬ್ಬಂದಿ ಇದ್ದಾರೆ.
ಷೇರು ವಿಕ್ರಯದ ಬಗ್ಗೆ ಸಂಸದೀಯ ಸ್ಥಾಯಿ ಸಮಿತಿಯು ಕರಡು ವರದಿ ಸಿದ್ಧಪಡಿಸಿದ್ದು, ಪುನಶ್ಚೇತನಕ್ಕೆ 5 ವರ್ಷ ಅವಕಾಶ ನೀಡುವಂತೆ ಸಲಹೆ ನೀಡಿದೆ.