ಬೆಂಗಳೂರು: ‘ನಿವ್ವಳ ನೇರ ತೆರಿಗೆ ಸಂಗ್ರಹದಲ್ಲಿ ಕರ್ನಾಟಕವು ನಿಗದಿತ ಗುರಿಯನ್ನು ಮೀರಿದೆ. ಇದಕ್ಕೆ ಅನುಗುಣವಾಗಿಯೇ ಈ ತೆರಿಗೆ ಹಣವನ್ನು ರಾಜ್ಯದ ಅಭಿವೃದ್ಧಿ ಚಟುವಟಿಕೆಗಳಿಗೆ ವಿನಿಯೋಗಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ನಗರದಲ್ಲಿ ಬುಧವಾರ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ವಸತಿ ಸೌಕರ್ಯ ಒದಗಿಸಲು ನಿರ್ಮಿಸುತ್ತಿರುವ ‘ಹೊಂಗಿರಣ’ ಸಂಕೀರ್ಣಕ್ಕೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
‘ಕರ್ನಾಟಕದಲ್ಲಿ ತೆರಿಗೆ ರೂಪದಲ್ಲಿ ಸಂಗ್ರಹಿಸಿದ ಹಣವು ಎಲ್ಲಿಗೂ ಹೋಗುವುದಿಲ್ಲ. ರಸ್ತೆ, ಮೆಟ್ರೊ, ರೈಲು, ಸಬರ್ಬನ್ ರೈಲ್ವೆ ಯೋಜನೆ, ಮಂಗಳೂರು ಬಂದರು, ‘ಕಲ್ಯಾಣ’ ಕರ್ನಾಟಕದ ಅಭಿವೃದ್ಧಿಗೆ ಈ ಹಣವು ಬಳಕೆಯಾಗುತ್ತದೆ’ ಎಂದು ಹೇಳಿದರು.
‘ದೇಶದ ಅಭಿವೃದ್ಧಿಗೆ ಬೆಂಗಳೂರಿನ ಪ್ರಜೆಗಳು ನೀಡುತ್ತಿರುವ ಕೊಡುಗೆ ಅನನ್ಯವಾದುದು. ಅದನ್ನು ಎಂದಿಗೂ ಕಡಿಮೆಯಾಗಿಲ್ಲ. ಇದಕ್ಕೆ ನಾನು ಆಭಾರಿಯಾಗಿದ್ದೇನೆ’ ಎಂದರು.
ತೆರಿಗೆ ಪಾಲು ಹಂಚಿಕೆ, ಅನುದಾನ, ನೆರವು ನೀಡಿಕೆಯಲ್ಲಿ ಕೇಂದ್ರ ಸರ್ಕಾರವು ಅನ್ಯಾಯ ಎಸಗುತ್ತಿದೆ ಎಂದು ರಾಜ್ಯ ಸರ್ಕಾರ ಆರೋಪಿಸಿತ್ತು. ಅಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಡಿ ‘ಚಲೋ ದೆಹಲಿ’ ಕೂಡ ಹಮ್ಮಿಕೊಳ್ಳಲಾಗಿತ್ತು.