ಮುಂಬೈ: ಭಾರತ ಮತ್ತು ಇಂಡೊನೇಷ್ಯಾ ನಡುವಿನ ದ್ವಿಪಕ್ಷೀಯ ಒಪ್ಪಂದ ವ್ಯಾಪಾರದಲ್ಲಿ ಸ್ಥಳೀಯ ಕರೆನ್ಸಿಗಳ ಬಳಕೆಗೆ ಉತ್ತೇಜನ ನೀಡಲು ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಇಂಡೊನೇಷ್ಯಾ ಒಡಂಬಡಿಕೆಗೆ ಸಹಿ ಹಾಕಿವೆ.
ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹಾಗೂ ಬ್ಯಾಂಕ್ ಇಂಡೊನೇಷ್ಯಾದ ಗವರ್ನರ್ ಪೆರ್ರಿ ವಾರ್ಜಿಯೊ ಈ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ಭಾರತದ ರೂಪಾಯಿ ಹಾಗೂ ಇಂಡೊನೇಷ್ಯಾ ಕರೆನ್ಸಿ ರುಪಿಯಾಕ್ಕೆ ಉತ್ತೇಜನ ನೀಡಲು ಒಪ್ಪಂದವು ನೆರವಾಗಲಿದೆ. ಇದರಿಂದ ಎರಡೂ ಕರೆನ್ಸಿಗಳು ಬಲಗೊಳ್ಳಲಿವೆ. ರಫ್ತುದಾರರು ಮತ್ತು ಆಮದುದಾರರು ಇನ್ವಾಯ್ಸ್ ಸೃಷ್ಟಿಸಿ ಸ್ಥಳೀಯ ಕರೆನ್ಸಿಗಳಲ್ಲೇ ಪಾವತಿ ಮಾಡಬಹುದಾಗಿದೆ ಎಂದು ಆರ್ಬಿಐ ಪ್ರಕಟಣೆ ತಿಳಿಸಿದೆ.
ಜೊತೆಗೆ, ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ವಹಿವಾಟುಗಳು ಸುಗಮವಾಗಿ ನಡೆಯುತ್ತವೆ. ಇದು ವ್ಯಾಪಾರ ಹಾಗೂ ವಿದೇಶಿ ವಿನಿಮಯ ಮಾರುಕಟ್ಟೆಯೂ ಬೆಳವಣಿಗೆ ಸಹಕಾರಿಯಾಗಲಿದೆ. ಎರಡು ದೇಶಗಳ ನಡುವೆ ಚಾರಿತ್ರಿಕ, ಸಾಂಸ್ಕೃತಿಕ ಹಾಗೂ ಆರ್ಥಿಕ ಸಂಬಂಧಗಳು ಗಟ್ಟಿಗೊಳ್ಳಲು ನೆರವಾಗುತ್ತದೆ ಎಂದು ಹೇಳಿದೆ.