ಬೆಂಗಳೂರು: ‘ನಾವು ಯಂತ್ರವನ್ನು ಅತಿಯಾಗಿ ಅವಲಂಬಿಸಿದ್ದೇವೆ. ಯಂತ್ರ ಜನರನ್ನು ಬೀದಿಪಾಲು ಮಾಡುತ್ತಿದೆ. ಈ ನಿಟ್ಟಿನಲ್ಲಿ ಯಂತ್ರ ಬಲದ ಬಳಕೆ ಕಡಿಮೆ ಮಾಡಬೇಕಿದೆ’ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅಭಿಪ್ರಾಯಪಟ್ಟರು.
ನೇಕಾರರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಲು ನಗರದ ಎಸ್ಸಿಎಂ ಹೌಸ್ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಾರ್ವಜನಿಕ ಸಂವಾದದಲ್ಲಿ ಅವರು ಮಾತನಾಡಿದರು.
‘ಸರ್ಕಾರದ ನೀತಿಯಿಂದ ಕೈಮಗ್ಗದ ನೇಕಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಿಗೆ ಪುನರ್ವಸತಿ ಕಲ್ಪಿಸುವ ಕೆಲಸವನ್ನು ಖಾದಿ ಆಯೋಗ ಮಾಡಬೇಕಿದೆ’ ಎಂದರು.
ಹಿರಿಯ ರಂಗಕರ್ಮಿ ಪ್ರಸನ್ನ, ‘ಕೈಮಗ್ಗದ ಹೆಸರಿನಲ್ಲಿ ಈ ದೇಶದಲ್ಲಿ ಮಾರಾಟವಾಗುತ್ತಿರುವ ಬಟ್ಟೆಯಲ್ಲಿ ಶೇ 70ರಷ್ಟು ಕಲಬೆರಕೆ ಬಟ್ಟೆ. ಗ್ರಾಹಕರು ಖಾದಿ ಬಟ್ಟೆ ಹಾಗೂ ಕೈಮಗ್ಗದ ಬಟ್ಟೆ ಖರೀದಿ ಮಾಡಲು ಸಿದ್ಧರಿದ್ದಾರೆ. ಆದರೆ, ಅವರಿಗೆ ಕೈಮಗ್ಗದ ಬಟ್ಟೆ ದೊರಕುತ್ತಿಲ್ಲ. ಕಲಬೆರಕೆ ನಿಲ್ಲಿಸಬೇಕು ಎಂಬುದು ಗ್ರಾಹಕರ ಬೇಡಿಕೆಯೂ ಹೌದು’ ಎಂದರು.
ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ, ‘ಪ್ಲಾಸ್ಟಿಕ್ ಸ್ಮರಣಿಕೆ ಖರೀದಿಸುವುದು ದರಿದ್ರ ಸಂಸ್ಕೃತಿ. ಇದನ್ನು ತ್ಯಜಿಸಿ ಅಂಗವಸ್ತ್ರ, ಬಟ್ಟೆ ಖರೀದಿ ಮಾಡುವ ಸಂಸ್ಕೃತಿ ಬೆಳೆಸಿಕೊಳ್ಳಬೇಕು. ಈ ಮೂಲಕ ಕೈಮಗ್ಗಕ್ಕೆ ಉತ್ತೇಜನ ನೀಡಬೇಕು’ ಎಂದು ಸಲಹೆ ನೀಡಿದರು.
ಲೇಖಕಿ ದು.ಸರಸ್ವತಿ, ಜನವಾದಿ ಮಹಿಳಾ ಸಂಘಟನೆಯ ಕೆ.ಎಸ್.ವಿಮಲಾ, ರಂಗಕರ್ಮಿ ಬಸವಲಿಂಗಯ್ಯ, ಲೇಖಕಿ ಮಮತಾ ಸಾಗರ್, ವಸ್ತ್ರವಿನ್ಯಾಸಕಿ ಪವಿತ್ರ, ಸ್ಲಮ್ ಜನಾಂದೋಲನ ಸಮಿತಿಯ ಸಂಚಾಲಕ ನರಸಿಂಹಮೂರ್ತಿ, ಸುಚಿತ್ರ ಫಿಲಂ ಸೊಸೈಟಿಯ ಶಶಿಧರ್, ವಿನಯ್ ಶ್ರೀನಿವಾಸ್, ಗಾರ್ಮೆಂಟ್ಸ್ ನೌಕರರ ಸಂಘಟನೆಯ ಪದಾಧಿಕಾರಿಗಳು ಮಾತನಾಡಿ ಕೈಮಗ್ಗ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿದರು.