ಅನುಭವದಿಂದ ಜೀವನದ ಆಳ ಹೆಚ್ಚುತ್ತದೆ, ತಿಳಿವು ಬೆಳೆಯುತ್ತದೆ ಎಂಬುದು ಸರಿ. ಆದರೆ, ಕೆಲವೊಮ್ಮೆ ಹಿಂದಿನ ಅನುಭವಗಳು ಮುಂದೆ ತೆಗೆದುಕೊಳ್ಳಬೇಕಾದ ತೀರ್ಮಾನಕ್ಕೆ ಅಡ್ಡಿಯಾಗಿ ನಿಲ್ಲುತ್ತವೆ ಎಂಬುದೂ ಅಷ್ಟೇ ಸತ್ಯ. ಗೋವಿಂದ ತನ್ನ ಕಂಪನಿಯ ಏಳ್ಗೆಗಾಗಿ ಬಹಳವಾಗಿ ದುಡಿಯುತ್ತಾನೆ. ಅವನು ಮತ್ತೊಂದು ಕಂಪನಿಯೊಂದಿಗೆ ಇಂದು ನಡೆಯಬೇಕಾದ ಮಾತುಕತೆಗಾಗಿ ಬಹಳ ತಯಾರಿ ಮಾಡಿದ್ದಾನೆ. ನಾಲ್ಕು ದಿನ ನಿದ್ರೆ ಕೂಡ ಮಾಡಿಲ್ಲ. ಮಾತುಕತೆಯೆಲ್ಲ ಚೆನ್ನಾಗಿ ನಡೆದು ಒಪ್ಪಂದವಾಯಿತು. ಇದರಿಂದಾಗಿ ಕಂಪನಿಗೆ ಇಪ್ಪತ್ತು ಲಕ್ಷ ರೂಪಾಯಿಗಳ ಲಾಭ ಬರುವುದು ಖಂಡಿತ.
ಅತ್ಯಂತ ಸಂತೋಷದಿಂದ ಗೋವಿಂದ ಮನೆಗೆ ನಡೆದ. ಹೆಂಡತಿಗೆ ಹೇಳಿದ, ‘ನಾನು ಹೇಳಿದ್ದಿಲ್ಲವೇ? ಹೊಸ ಒಪ್ಪಂದವಾಯಿತು. ಎಲ್ಲವೂ ನಾನು ಎಣಿಸಿದಂತೆಯೇ ನಡೆಯಿತು. ಆಗದೇ ಇರುತ್ತದೆಯೇ? ನಾನು ಇಂದೂ ಕೂಡ ಅದೇ ಕೆಂಪು ಟೈ ಕಟ್ಟಿಕೊಂಡಿದ್ದೆ!’ ಗೋವಿಂದನಿಗೆ ಖಚಿತತೆ ಇದೆ, ಕೆಂಪು ಟೈ ಕಟ್ಟಿಕೊಂಡರೆ ಕೆಲಸವಾಗುವುದು ಗ್ಯಾರಂಟಿ. ಅವರು ಅಂತರರಾಷ್ಟ್ರೀಯ ಮಟ್ಟದ ಕ್ರಿಕೆಟ್ ಆಟಗಾರರು. ಆದರೆ, ಮೈದಾನದೊಳಗೆ ಹೋಗುವಾಗ ಎಂದಿಗೂ ಎಡಗಾಲನ್ನಿಟ್ಟು ಹೋಗುವುದಿಲ್ಲ, ಪ್ರತಿ ಸಲವೂ ನಿಂತು ಬಲಗಾಲನ್ನು ಒಳಗಿಟ್ಟೇ ಹೋಗಬೇಕು. ಹಾಗಂತ ಅವರು ಪ್ರತಿಬಾರಿಯೂ ಸೆಂಚುರಿ ಹೊಡೆದಿದ್ದಾರೆಂದಲ್ಲ. ಆದರೆ, ಅಕಸ್ಮಾತ್ ಎಡಗಾಲನ್ನಿಟ್ಟು ಹೋದರೆ ರನ್ನು ತೆಗೆಯಲಾಗುವುದಿಲ್ಲವಂತೆ, ಯಾಕೆಂದರೆ ಒಮ್ಮೆ ಹಾಗೆ ಹೋದಾಗ ಸೊನ್ನೆಗೇ ಔಟಾಗಿದ್ದರಂತೆ. ಪಕ್ಕದ ಮನೆಯ ಗುಂಡಣ್ಣ ಯಾವುದಾದರೂ ಮಹತ್ವದ ಕೆಲಸಕ್ಕೆ ಹೋಗುವುದಾದರೆ ಹೆಂಡತಿಗೆ ಹೇಳಿ ಪಕ್ಕದ ಮನೆಯ ಹುಡುಗಿ ಈತ ಹೊರಗೆ ಬರುತ್ತಿದ್ದಂತೆ ಎದುರಿಗೆ ಬರುವಂತೆ ಮಾಡಿಸಿಕೊಳ್ಳುತ್ತಾನೆ. ಅವಳೇನಾದರೂ ಬೇರೆ ಕೆಲಸದಲ್ಲಿದ್ದರೆ, ಆಕೆ ಬರುವವರೆಗೂ ಕಾಯುತ್ತಾನೆ. ಆಕೆ ಅವನಿಗೆ ತುಂಬ ಶುಭಶಕುನ. ಆಕೆ ಎದುರಿಗೆ ಬಂದರೆ ಕೆಲಸವಾಗುವುದು ಖಾತ್ರಿ. ಬಹಳಷ್ಟು ಬಾರಿ ಆಕೆ ಎದುರು ಬಂದಾಗಲೂ ಕೆಲಸವಾಗದೇ ಇದ್ದದ್ದು ಇದೆ. ಆದರೆ, ಆಕೆ ಬರದಿದ್ದರೆ ಆಗುವುದೇ ಇಲ್ಲವಂತೆ.
ರಷ್ಯಾದ ವಿಜ್ಞಾನಿ ಪಾವ್ಲೋವ್ ಇದನ್ನೇ ಹೇಳುತ್ತಾನೆ. ಒಮ್ಮೆ ಯಾವುದಾದರೂ ಅನುಭವವಾದರೆ ಮುಂದೆಯೂ ಹಾಗೆಯೇ ಆಗುತ್ತದೆಂಬ ನಂಬಿಕೆ ಬಲಿಯುತ್ತದೆ. ಬಚ್ಚಲುಮನೆಯಲ್ಲಿ ಗೀಜರ್ ಹಾಕಲು ಹೋದಾಗ ಸ್ವಿಚ್ ಬಲವಾದ ಶಾಕ್ ಹೊಡೆದರೆ ಪ್ರತಿಬಾರಿಯೂ ಕೈ ಸ್ವಿಚ್ ಬಳಿ ಹೋದಾಗ ಹೆದರುತ್ತದೆ. ಬಾಲ್ಯದಲ್ಲಿ ನಿಮ್ಮನ್ನು ನಾಯಿ ಕಚ್ಚಿದ್ದರೆ ಕೊನೆಯವರೆಗೂ ನಾಯಿಯ ಭಯ ಕಾಡುತ್ತದೆ. ಕೆಲವರು ಮಂಗಳವಾರ ಯಾವ ಕೆಲಸವನ್ನು ಮಾಡಬಾರದೆಂದು ತೀರ್ಮಾನಿಸುತ್ತಾರೆ. ಯಾಕೆಂದರೆ ಮಂಗಳವಾರ ಮಾಡಿದ ಯಾವ ಕೆಲಸವೂ ಸಫಲವಾಗದೆಂಬ ನಂಬಿಕೆ ಅವರದು. ಅದಕ್ಕೆ ಅಮೆರಿಕದ ಮಹಾನ್ ವಿಜ್ಞಾನಿ ಕಾರ್ಲಸಗಾಸ್ ಹೇಳುತ್ತಾನೆ, ‘ಎಂದಿಗೋ ಒಂದು ಘಟನೆ ಆಗುತ್ತದೆ.
ಆಗ ಯಾವುದೋ ಒಂದು ನಕ್ಷತ್ರ ಕೂಟ ಇರುತ್ತದೆ. ಮತ್ತೆಂದೋ, ಎಷ್ಟೋ ನೂರು ವರ್ಷಗಳ ನಂತರ ಅಂತಹುದೇ ಘಟನೆ ನಡೆದಾಗ ಅಕಸ್ಮಾತ್ ಅವೇ ನಕ್ಷತ್ರ ಕೂಟ ಇದ್ದರೆ ಅದನ್ನು ಅಕಸ್ಮಿಕ ಎಂದು ಗ್ರಹಿಸದೇ ಅದೊಂದು ಅನಾಹುತದ ಗಳಿಗೆ ಎಂದು ತೀರ್ಮಾನಿಸಿಬಿಡುತ್ತೇವೆ. ಇಂದು ನಡೆಯುವ ಘಟನೆಗಳಿಗೆ ನಿನ್ನೆಯ ಘಟನೆಗಳು ಕಾರಣವಾಗುವುದಿಲ್ಲ. ಹಾಗೆ ಆದೀತು ಎಂಬ ನಿಮ್ಮ ಮನಸ್ಸಿನ ಭಯ, ಆತ್ಮವಿಶ್ವಾಸವನ್ನು ತಗ್ಗಿಸಿ, ಚಿಂತನಾಕ್ರಮವನ್ನು ಕುಗ್ಗಿಸಿ ಹಾಗೆಯೇ ಆಗುವಂತಾಗುತ್ತದೆ. ಅದಕ್ಕೆ ನಕ್ಷತ್ರ ಕೂಟ, ಗ್ರಹಕೂಟ ಕಾರಣವಲ್ಲ. ಅದಕ್ಕೆ ಮುಖ್ಯ ಕಾರಣ ನಿಮ್ಮ ಮನಸ್ಸಿನ ಹಿಂಜರಿಕೆ’. ಇದು ತುಂಬ ಸತ್ಯದ ಮಾತು. ನಿನ್ನೆಯ ಘಟನೆಯಿಂದ ನಾವು ಪಾಠ ಕಲಿಯಬೇಕು, ವಿವೇಚನೆಯಿಂದ ವಿಮರ್ಶೆಮಾಡಿ ನಡೆಯಬೇಕು. ಆದರೆ, ಆ ಅನುಭವ ನಮ್ಮ ಮುಂದಿನ ತೀರ್ಮಾನವನ್ನು ಕಟ್ಟಿ ಹಾಕಬಾರದು, ಮೂಢನಂಬಿಕೆಯತ್ತ ತಳ್ಳಬಾರದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.