ಮುಧೋಳ: ವೈದ್ಯ ವೃತ್ತಿಯಲ್ಲಿ ಹೆಸರು ಮಾಡಿರುವ ನಗರದ ಡಾ.ಅರವಿಂದ ನಾಯಿಕ ಕೃಷಿಯಲ್ಲೂ ತೊಡಗಿ ಯಶಸ್ಸಿನ ಹಾದಿಯಲ್ಲಿದ್ದಾರೆ.
ಬಡವರ ಡಾಕ್ಟರ್ ಎಂದು ಹೆಸರು ಮಾಡಿರುವ ಇವರು ಮುಧೋಳ ತಾಲ್ಲೂಕಿನ ಉತ್ತೂರ ಗ್ರಾಮದವರು. ಈ ಗ್ರಾಮ ನಗರದಿಂದ 10 ಕಿ. ಮೀ ದೂರದಲ್ಲಿದೆ. ತಮ್ಮ 30 ಎಕರೆ ಜಮೀನಿನಲ್ಲಿ ಘಟಪ್ರಭಾ ನದಿ ಹಾಗೂ ಕೊಳವೆ ಬಾವಿಯಿಂದ ನೀರಾವರಿ ಸೌಲಭ್ಯ ಪಡೆದಿದ್ದಾರೆ.
ಕಲ್ಲಂಗಡಿ ಹಣ್ಣಿನ ಕೃಷಿ ಅತ್ಯಂತ ಕಷ್ಟದಾಯಕ ಬೆಳೆ. ಹಲವು ಸಮಸ್ಯೆಗಳು, ರೋಗಗಳಿಂದಾಗಿ ಈ ಬೆಳೆಯ ನಿರ್ವಹಣೆ ಕಷ್ಟದಾಯಕ. ಅದಕ್ಕಾಗಿ ಬಹುತೇಕ ರೈತರು 2 ಎಕರೆಯಿಂದ 4 ಎಕರೆ ಮಾತ್ರ ಮಾಡುತ್ತಾರೆ. ಆದರೆ ಡಾ.ಅರವಿಂದ ನಾಯಿಕ 5 ಎಕರೆಯಲ್ಲಿ ಕಪ್ಪು ಹಸಿರು ಬಣ್ಣದ ಮೆಲೊಡಿ ತಳಿಯ ರಫ್ತು ಗುಣಮಟ್ಟದ ಕಲ್ಲಂಗಡಿಯನ್ನು ಭರಪೂರ ಬೆಳೆದಿದ್ದಾರೆ. ಉಳಿದ ಜಮೀನಿನಲ್ಲಿ ಕಬ್ಬು ಹಾಗೂ ಗೋವಿನ ಜೋಳ ಬೆಳೆಯುತ್ತಿದ್ದಾರೆ.
ಎಕರೆಗೆ 7,500 ಸಸಿಯನ್ನು ಪ್ರತಿಯೊಂದಕ್ಕೆ ₹ 3ರಂತೆ ತಂದು ಒಟ್ಟು 37,500 ಸಸಿಗಳನ್ನು ನಾಟಿ ಮಾಡಲಾಗಿದೆ. ಒಂದೊಂದು ಬಳ್ಳಿಗೆ ಎರಡರಿಂದ ಮೂರು ಕಲ್ಲಂಗಡಿ ಬಿಟ್ಟಿವೆ. ಮಲ್ಚಿಂಗ್ ಪೇಪರ್ ಹಾಕಲಾಗಿದೆ. ಹೆಂಡಿ ಗಬ್ಬರದ ಮೂಲಕ ಭೂಮಿಯನ್ನು ಹದಮಾಡಿ ಡ್ರಿಪ್ ಮೂಲಕ ಪೋಷಕಾಂಶ ನೀಡಲಾಗಿದೆ. ರಾಸಾಯನಿಕ ದ್ರಾವಣ ಸಿಂಪರಣೆ ಮಾಡಲಾಗಿದೆ. ಗೊಬ್ಬರ, ದ್ರಾವಣ, ಸಿಂಪರಣೆ ಎಲ್ಲ ಸೇರಿ ಪ್ರತಿ ಎಕರೆಗೆ ₹ 72 ಸಾವಿರ ವೆಚ್ಚ ಮಾಡಲಾಗಿದೆ ಎಂದು ಡಾ.ಅರವಿಂದ ವಿವರಿಸಿದರು.
ಒಂದೊಂದು ಕಲ್ಲಂಗಡಿ 4 ಕೆ.ಜಿ ಯಿಂದ 7 ಕೆ.ಜಿಯವರೆಗೆ ತೂಗುತ್ತದೆ. ಎಕರೆಗೆ 25 ರಿಂದ 30 ಟನ್ ಇಳುವರಿ ನಿರೀಕ್ಷಿಸಲಾಗುತ್ತಿದೆ. ಸದ್ಯ ಕಲ್ಲಂಗಡಿಗೆ ಮಾರುಕಟ್ಟೆಯಲ್ಲಿ ಕೆ.ಜಿಗೆ ₹ 14.50 ದರವಿದೆ.
‘ಕಲ್ಲಂಗಡಿ ಬೆಳೆ ನಾಟಿ ಮಾಡಿದ ಮೇಲೆ ನಿತ್ಯ ತೋಟಕ್ಕೆ ಹೋಗಿ ಅಲ್ಲೇ ವಾಕಿಂಗ್, ವ್ಯಾಯಾಮ ಮಾಡುತ್ತಿದ್ದೇನೆ. ಫಸಲು ಉತ್ತಮವಾಗಿ ಬಂದಿದೆ. ನನ್ನ ಕೃಷಿಕ ಸಂಗಾತಿ ಮಂಜುನಾಥ ಘಾಟಗೆ ಕಲ್ಲಂಗಡಿ ಬೆಳೆಯ ಸಂಪೂರ್ಣ ಉಸ್ತುವಾರಿ ನೋಡಿಕೊಂಡು ಕಾಲಕಾಲಕ್ಕೆ ಔಷಧ, ಗೊಬ್ಬರ ನೀಡುತ್ತ ಬಂದಿದ್ದಾರೆ. ಲಾಭದ ಆಸೆಯಿಂದ ಕೃಷಿ ಮಾಡಿಲ್ಲ’ ಎಂದು ಡಾ. ಅರವಿಂದ ತಿಳಿಸಿದರು.
‘ವೈದ್ಯ ವೃತ್ತಿಗಿಂತ ಕೃಷಿ ಸಂತಸ ನೀಡುತ್ತದೆ. ವೈದ್ಯಕೀಯ ವೃತ್ತಿಯಿಂದ ಹಣ ಗಳಿಸಬಹುದು ಆದರೆ ಕೃಷಿಯಿಂದ ಮಾನಸಿಕ ನೆಮ್ಮದಿ ಸಿಗುತ್ತದೆ. ನನ್ನ ತಂದೆ ದಿ.ಡಾ. ಸುಭಾಷ ನಾಯಿಕ ಹೆಸರುವಾಸಿ ವೈದ್ಯರಾಗಿ ಒಳ್ಳೆಯ ಕೃಷಿಕರಾಗಿ ಹೆಸರು ಪಡೆದಿದ್ದರು. ನನಗೂ ಕೃಷಿಯತ್ತ ಆಸಕ್ತಿ. ಪತ್ನಿ ಡಾ. ಅನಿತಾ ನಾಯಿಕ ಕೃಷಿ ಮನೆತನದಿಂದ ಬಂದಿರುವುದರಿಂದ ನನಗೆ ಬೆಂಬಲವಾಗಿ ನಿಂತಿದ್ದಾರೆ’ ಎಂದು ವಿವರಿಸಿದರು.
* 5 ಎಕರೆಯಲ್ಲಿ ಕಪ್ಪು ಹಸಿರು ಬಣ್ಣದ ಮೆಲೊಡಿ ತಳಿ ನಾಟಿ * ರಫ್ತು ಗುಣಮಟ್ಟದ ಉತ್ತಮ ಫಸಲು * 37,500 ಸಸಿ ನಾಟಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.