ಚಿಕ್ಕೋಡಿ: ತಾಲ್ಲೂಕಿನ ಯಕ್ಸಂಬಾ ಪಟ್ಟಣದ ಮಲಿಕವಾಡ ಶರ್ಯತ್ತು ಮೈದಾನದಲ್ಲಿ ಮಂಗಳವಾರ ಜನಸಾಗರವೇ ಸೇರಿತ್ತು. ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ ಅವರ 77ನೇ ಜನ್ಮ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಅಂತರರಾಜ್ಯ ಜೋಡೆತ್ತಿನ ಓಟದ ಸ್ಪರ್ಧೆ ಮೈ ನವಿರೇಳಿಸಿತು. ರಾಜ್ಯ ಹಾಗೂ ಹೊರರಾಜ್ಯದಿಂದ ಅಪಾರ ಸಂಖ್ಯೆಯಲ್ಲಿ ಸೇರಿದ ಹಳ್ಳಿಯ ಜನರ ರೋಮಾಂಚನಗೊಂಡರು.
‘ಅ’ ವರ್ಗ, ‘ಬ’ ವರ್ಗ ಹಾಗೂ ‘ಕ’ ವರ್ಗ ಎಂದು ಮೂರು ವಿಭಾಗಗಳಲ್ಲಿ ನಡೆದ ಸ್ಪರ್ಧೆಗೆ ಪ್ರಕಾಶ ಹುಕ್ಕೇರಿ ಹಾಗೂ ಶಾಸಕ ಗಣೇಶ ಹುಕ್ಕೇರಿ ಚಾಲನೆ ನೀಡಿದರು. 3 ಲಕ್ಷಕ್ಕೂ ಹೆಚ್ಚು ಜನ ಇದನ್ನು ಕಣ್ತುಂಬಿಕೊಂಡರು.
ಮೊದಲು ₹51 ಲಕ್ಷ ಮೊತ್ತದ ಬಹುಮಾನ ಘೋಷಿಸಲಾಗಿತ್ತು. ಶರ್ಯತ್ತು ಪ್ರಿಯರ ಮನವಿಯ ಮೇರೆಗೆ ‘ಕ’ ವರ್ಗ ಮಾಡಿ ಹೆಚ್ಚುವರಿಯಾಗಿ ಬಹುಮಾನದ ಮೊತ್ತವನ್ನು ₹64 ಲಕ್ಷಕ್ಕೆ ಹೆಚ್ಚಳ ಮಾಡಲಾಯಿತು.
ಜನ ವೀಕ್ಷಿಸಲು ಇಕ್ಕೆಲಗಳಲ್ಲೂ ಗ್ಯಾಲರಿ ಮಾಡಲಾಗಿತ್ತು. ನಿಗಾ ಇಡಲು 8 ಡ್ರೋನ್ ಕ್ಯಾಮೆರಾ, 20 ಜಿಮ್ಮಿ ಕ್ಯಾಮೆರಾ ಹಾಕಲಾಗಿತ್ತು. 40 ಕಡೆಗೆ ಕುಡಿಯುವ ನೀರಿನ ವ್ಯವಸ್ಥೆ, ಎಂಟು ಕಡೆಗೆ ವಾಹನ ನಿಲುಗಡೆ, ಎಂಟು ಆಂಬುಲೆನ್ಸ್, 4 ಪಶು ಆಂಬುಲೆನ್ಸ್, ಎರಡು ಅಗ್ನಿಶಾಮಕ ವಾಹನಗಳ ವ್ಯವಸ್ಥೆ ಮಾಡಲಾಗಿತ್ತು.
ಚಲನಚಿತ್ರ ನಿರ್ದೇಶಕ ಯೋಗರಾಜ ಭಟ್, ಹಿರಿಯ ನಟ ದೊಡ್ಡಣ್ಣ, ನಟಿ ಮಿಶ್ವಿಕಾ ನಾಯ್ದು ಆಗಮಿಸಿ ಹಾಡಿ ಕುಣಿದು ಜನರನ್ನು ರಂಜಿಸಿದರು.
ನೀಲಾಂಬಿಕಾ ಹುಕ್ಕೇರಿ, ಮಾಜಿ ಶಾಸಕ ಕಾಕಾಸಾಹೇಬ ಪಾಟೀಲ, ಸುಭಾಷ ಜೋಶಿ, ಯುವ ಮುಖಂಡ ಉತ್ತಮ ಪಾಟೀಲ, ಪಂಕಜ ಪಾಟೀಲ, ಬಾಳಾಸಾಹೇಬ ಪಾಟೀಲ, ಎ.ಡಿ. ಇಂಗಳೆ, ಸಂಭಾಜಿ ಪಾಟೀಲ, ಪುಂಡಲೀಕ ಖೋತ, ಪಿರಗೊಂಡ ಪಾಟೀಲ, ಸುನೀಲ ಸಪ್ತಸಾಗರ, ರವೀಂದ್ರ ಖೋತ, ರವೀಂದ್ರ ಮಾನೆ ಮುಂತಾದವರು ಇದ್ದರು.