ಯಳಂದೂರು: ನೂರು ಹಣ್ಣನ್ನು 100 ಜನರಿಗೆ ಹಂಚಿದರೆ ಪ್ರತಿಯೊಬ್ಬರಿಗೂ ಎಷ್ಟು ಸಿಗಬಹಹುದು? ಇದು ಶಿಕ್ಷಕರ ಪ್ರಶ್ನೆ. ‘ಪ್ರತಿಯೊಬ್ಬರಿಗೂ ಒಂದೊಂದು ಸಿಗುತ್ತದೆ’. ಇದು ಮಕ್ಕಳ ಸರಳ ಉತ್ತರ. ಆದರೆ, ಶೂನ್ಯದಿಂದ 0 ಹಂಚಿದರೆ ಏನು ಬರುತ್ತದೆ? ಇದು ವಿದ್ಯಾರ್ಥಿ ಪ್ರಶ್ನೆ? ಇಂತಹ ಅತಾರ್ಕಿಕ ಪ್ರಶ್ನೆ ಕೇಳಿ ಬೋಧಕರಿಂದ ‘ತರಲೆ’ ಎನಿಸಿಕೊಂಡ ವಿದ್ಯಾರ್ಥಿ ‘ರಾಮಾನುಜನ್’.
ದೇಶವು ಇವರ ಹಸರಿನಲ್ಲಿ ಪ್ರತಿ ವರ್ಷ ಡಿ.22ರಂದು ಗಣಿತ ದಿನ ಆಚರಿಸುವ ಮೂಲಕ ಅವರ ಹೆಸರನ್ನು ಚಿರಸ್ಥಾಯಿಗೊಳಿಸಿದೆ.
ತಾಲ್ಲೂಕಿನ ಫ್ರೌಢ ಮತ್ತು ಪ್ರಾಥಮಿಕ ಶಾಲೆಗಳಲ್ಲಿ ಶ್ರೀನಿವಾಸ ರಾಮಾನುಜನ್ ಹೆಸರಿನಲ್ಲಿ ಗಣಿತ ಹಬ್ಬ ಆಚರಿಸುತ್ತಾರೆ. ಬೀಜಗಣಿತ, ಪೈ, ಪ್ರಮೇಯ, ಗಣಿತದ ಸೂತ್ರಗಳನ್ನು ಸರಳವಾಗಿ ಮಕ್ಕಳಿಗೆ ಕಲಿಸುವ ಚತುರೋಪಾಯ ತಿಳಿಸಲಾಗುತ್ತದೆ. ಕಲಿಕೋಪಕರಣ, ಸಂಖ್ಯೆ ಚಟುವಟಿಕೆ ಹಾಗೂ ಸ್ಮರಣೆಗೆ ಒತ್ತು ಕೊಡುವ ನೂರಾರು ಗಣಿತದ ಆಟೋಟಗಳನ್ನು ಪರಿಚಯಿಸುವತ್ತ ಶಿಕ್ಷಣ ಇಲಾಖೆ ಕಾರ್ಯ ರೂಪಿಸಿದೆ.
‘ಗಣಿತ ಕಬ್ಬಿಣ ಕಡಲೆಯಲ್ಲ. ಮಕ್ಕಳಿಗೆ ಸುಲಲಿತವಾಗಿ ಅರ್ಥ ಅಗುವಂತೆ ಬೋಧಿಸಬೇಕು. ಎಳೆಯ ಮಕ್ಕಳಿಗೆ ಜನಪದ ಗಣಿತ, ವೇದ ಗಣಿತ ಚಮತ್ಕಾರಗಳ ಮೂಲಕ ಕಲಿಸಬಹುದು. ಹಾಡು, ಆಟದ ಮೂಲಕ ಮನವರಿಕೆ ಮಾಡಬಹುದು. 12ನೇ ವಯಸ್ಸಿನಲ್ಲಿ ರಾಮಾನುಜನ್ ತ್ರಿಕೋನಮಿತಿಯಲ್ಲಿ ಉತ್ಕೃಷ್ಟ ಸಾಧನೆ ಮಾಡಿದ್ದ ಹಾದಿಯಲ್ಲಿ ಮಕ್ಕಳಿಗೆ ಕಲಿಸುವ ಜವಾಬ್ಧಾರಿ ಶಿಕ್ಷಕರ ಮೇಲೆ ಹೆಚ್ಚಿದೆ’ ಶಿಕ್ಷಣ ಇಲಾಖೆಯ ಜಿಲ್ಲಾ ಶಿಕ್ಷಣಾಧಿಕಾರಿ ಮಲ್ಲಿಕಾರ್ಜುನ ‘ಪ್ರಜಾವಾಣಿ’ಗೆ ತಿಳಿಸಿದರು.
ಜನ್ಮದಿನ ಸಂಖ್ಯೆ: ‘22121887. ಎರಡು ಅಂಕೆಗಳ ನಡುವೆ ಗೆರೆ ಇಟ್ಟಾಗ ರಾಮನುನ್ ಜನ್ಮ ದಿನ ಮತ್ತು ವರ್ಷ ಮೂಡುತ್ತದೆ. ಇವೇ ಸಂಖ್ಯೆ ಮೂಲಕ 88170925, 10248916 ಮತ್ತು 19862311 ಸಂಖ್ಯೆಗಳ ಎರಡೆರಡು ಸಂಖ್ಯೆಯನ್ನು 16 ಮನೆಗಳಲ್ಲಿ ಇಟ್ಟು ಕೂಡಿಸಿದಾಗ ಒಟ್ಟು ಮೊತ್ತ ಎತ್ತ ಕೂಡಿದರೂ 139 ಆಗಲಿದೆ ಎಂಬುದುನ್ನು ರಾಮಾನುಜನ್ ತಾರ್ಕಿಕ ಚಿಂತನೆ ಮೂಲಕ ತಿಳಿಸಿದರು. ತರಗತಿಗಳಲ್ಲಿ ಮನಸ್ಸಿಗೆ ಉಲ್ಲಾಸ ನೀಡುವ ಇಂತಹ ಅಂಕಿಯಾಟ ಮಕ್ಕಳು ಗಣಿತ ಕ್ಷೇತ್ರದತ್ತ ಆಕರ್ಷಿತರಾಗಲು ಸಾಧ್ಯವಾಗಲಿದೆ’ ಎಂದು ಡಾ.ಭೀಮರಾವ್ ರಾಮ್ಜಿ ಪ್ರೌಢಶಾಲೆಯ ಗಣಿತ ಶಿಕ್ಷಕ ಎನ್.ಪರಶಿವಮೂರ್ತಿ ವಿವರಿಸಿದರು.
ಪ್ರಸಿದ್ಧ ಗಣಿತ ತಜ್ಞ ರಾಮಾನುಜನ್ 1887ರ ಡಿ.22ರಂದು ತಮಿಳುನಾಡಿನ ಈರೋಡ್ನಲ್ಲಿ ಜನಿಸಿದರು. ಔಪಚಾರಿಕ ಶಿಕ್ಷಣ ಪಡೆಯದ ಇವರು ಚಿಕ್ಕ ವಯಸ್ಸಿನಲ್ಲಿ ಗಣಿತದತ್ತ ಆಸಕ್ತಿ ಬೆಳೆಸಿಕೊಂಡರು. ಇಂಡಿಯನ್ ಮ್ಯಾಥಮಾಟಿಕಲ್ ಸೊಸೈಟಿ ಸೇರಿ 1913ರಲ್ಲಿ ಕೇಂಬ್ರಿಡ್ಜ್ ಜಿ.ಎಚ್.ಹಾರ್ಡಿ ಅವರ ಪ್ರಭಾವಕ್ಕೆ ಒಳಗಾಗಿ ಲಂಡನ್ ಸೇರಿದರು. 1918ರಲ್ಲಿ ರಾಯಲ್ ಸೊಸೈಟಿಯ ಗಣಿತ ಕ್ಷೇತ್ರದಲ್ಲಿ ಪ್ರಯೋಗ ನಡೆಸಿದರು. 3000ಕ್ಕೂ ಹೆಚ್ಚಿನ ಗಣಿತ ಫಲಿತಾಂಶ ಹಾಗೂ 120 ಗಣಿತ ಪ್ರಮೇಯ ಹೇಳಿಕೆಗಳು ಇವರ ಸಾಧನೆಗೆ ಕಿರೀಟವಾಗಿವೆ. 1920ರಲ್ಲಿ ತಮ್ಮ 32ನೇ ವಯಸ್ಸಿನಲ್ಲಿ ಅನಾರೋಗ್ಯದಿಂದ ನಿಧನರಾದರು. 2012ರಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರು ರಾಮಾನುಜನ್ ಹಸರಿನಲ್ಲಿ ಪ್ರತಿ ವರ್ಷ ರಾಷ್ಟ್ರೀಯ ಗಣಿತ ದಿನ ಆಚರಿಸಲು ಕರೆಕೊಟ್ಟಿದ್ದಾರೆ" ಎಂದು ಮುಖ್ಯ ಶಿಕ್ಷಕ ಎನ್.ಪ್ರಮೋದ್ ಚಂದ್ರನ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.