ಚನ್ನರಾಯಪಟ್ಟಣ: ಮಲ್ಲಕಂಬದಲ್ಲಿ ಮಾನವ ಗೋಪುರ... ಹಗ್ಗದಲ್ಲಿ ಯೋಗಾಸನ ಪ್ರದರ್ಶನ...
ಪಟ್ಟಣದ ಗಣಪತಿ ಆಸ್ಥಾನ ಮಂಟಪದಲ್ಲಿ ಸಾಯಿ ಕೊರಿಯರ್ ಆಶ್ರಯದಲ್ಲಿ ಏರ್ಪಡಿಸಿದ್ದ ಮಲ್ಲಕಂಬ ಪ್ರದರ್ಶನದಲ್ಲಿ ಧಾರವಾಡದ ಸ್ವಾಮಿ ವಿವೇಕಾನಂದ ಯೋಗ ಕೇಂದ್ರದ ಮಕ್ಕಳು ನಡೆಸಿಕೊಟ್ಟ ವಿಶಿಷ್ಟ ಬಗೆಯ ಪ್ರದರ್ಶನ ನೋಡುಗರ ಗಮನಸೆಳೆಯಿತು.
ಪ್ರಾಥಮಿಕ ಶಾಲೆಯಿಂದ ಕಾಲೇಜುವರೆಗಿನ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿದ್ದರು.
ನೀಳಕಾಯದ ವಿದ್ಯಾರ್ಥಿಗಳು ನಡೆಸಿಕೊಡುವ ಮಲ್ಲಕಂಬ ಪ್ರದರ್ಶನ ವೀಕ್ಷಣೆ ಈ ಭಾಗದವರಿಗೆ ಹೊಸ ಅನುಭವ. ಈ ಕಾರಣದಿಂದ ಹೆಚ್ಚು ಜನಸೇರಿದ್ದರು.
ಧಾರವಾಡದ ಒಟ್ಟು 16 ಮಕ್ಕಳು ಭಾಗವಹಿಸಿದ್ದರು. ಇವರಲ್ಲಿ ಸಾಕಷ್ಟು ಮಂದಿ ಈಗಾಗಲೇ ರಾಜ್ಯ, ರಾಷ್ಟ್ರಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಿದ ಹೆಗ್ಗಳಿಕೆ ಹೊಂದಿದ್ದಾರೆ.
ಮಲ್ಲಕಂಬ ಏರಿ ದೇಹವನ್ನು ತಿರುಗಿಸುವ ಚಮತ್ಕಾರ, ದೇಹದಂಡಿಸುವ ವಿಧಾನ. ಮಾನವ ಗೋಪುರ ನಿರ್ಮಿಸುವುದು. ಕೂರ್ಮಾಸನ, ಕಂಬದ ಮೇಲೆ `ಟಿ~ ಆಕಾರದಲ್ಲಿ ನಿಂತು ಪ್ರದರ್ಶನ ನೀಡುವುದು, ಸ್ಥಿರಕಂಬ, ಖಡ್ಗ ಕಂಬ, ಶವಾಸನ, ಧನುರಾಸನ, ಪದ್ಮಾಸನ, ಮಯೂರಾಸನ. ಅದೇ ರೀತಿ ಹಗ್ಗದಲ್ಲಿ ಹೆಣ್ಣು ಮಕ್ಕಳು ನಡೆಸಿಕೊಟ್ಟ ಯೋಗಾಸನದ ವಿವಿಧ ಭಂಗಿ ನೋಡುಗರನ್ನು ಆಕರ್ಷಿಸಿದವು.
ಈ ರೀತಿಯ ಯೋಗಾಸನ ಮಾಡುವುದರಿಂದ ಎಲ್ಲಾ ಬಗೆಯ ರೋಗದಿಂದ ದೂರ ಇರಬಹುದು. ಇಂದಿನ ಕಲುಷಿತ ವಾತಾವರಣದಲ್ಲಿ ಮಾನಸಿಕ, ದೈಹಿಕವಾಗಿ ಸದೃಢವಾಗಿರಬೇಕಾದರೆ ಯೋಗಾಸನ ಅನಿವಾರ್ಯ ಎನ್ನುತ್ತಾರೆ ವಿವೇಕಾನಂದ ಯೋಗಕೇಂದ್ರದ ಮುಖ್ಯಸ್ಥರು.