ಯಡ್ರಾಮಿ: ಪಟ್ಟಣದ ರಾಮತೀರ್ಥ ಕೋಟೆ ಬಳಿಯ ಕೆರೆ, ಬಾವಿ, ಕಾಲುವೆಗಳಿಗೆ ನೀರು ತುಂಬಿಸಲು ಕೃಷ್ಣಾ ಜಲ ಭಾಗ್ಯ ನಿಗಮ (ಕೆಬಿಜೆಎನ್) ಕಾಲುವೆ ಡಿ-10 ವಿತರಣಾ ಕಾಲುವೆ ಮೂಲಕ 0.006 ಟಿಎಂಸಿ ಅಡಿ ನೀರು ಬಿಡುಗಡೆ ಮಾಡಲಾಗಿದೆ. ಇದರಿಂದ ಜನರಿಗೆ ಕುಡಿಯಲು ನೀರು ಸಿಗುವುದಷ್ಟೇ ಅಲ್ಲದೆ ಅಂತರ್ಜಲಮಟ್ಟವೂ ಹೆಚ್ಚಾಗಲಿದೆ.
ಪಟ್ಟಣದ ಕುಸ್ತಿ ಕಾಲೊನಿ ಬಳಿಯ ನಾರಾಯಣಪುರ ಎಡದಂಡೆ ಉಪಕಾಲುವೆ ಡಿ-10 ಗೇಟ್ನಿಂದ 2 ಕಿ.ಮೀ ಉದ್ದ ಜೆಸಿಬಿ ಮೂಲಕ ಸಣ್ಣ ಕಾಲುವೆ ಮಾಡಿ ರಾಮತೀರ್ಥಕ್ಕೆ ನಿರು ಬರುವಂತೆ ಮಾಡಲಾಗಿದೆ.
ಪಟ್ಟಣದಲ್ಲಿ 1ರಿಂದ 5ನೇ ವಾರ್ಡ್ನಲ್ಲಿರುವ ಕೊಳವೆ ಬಾವಿಗಳು ಬತ್ತಿದ್ದು ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿತ್ತು. ರಾಮತೀರ್ಥ ಕೋಟೆಯ ಸುತ್ತ ಇರುವ ಕೆರೆ, ಬಾವಿ, ಕಾಲುವೆಗಳಿಗೆ ನೀರು ತುಂಬಿಸುವುದರಿಂದ ಪಕ್ಷಿ, ಜನ, ಜಾನುವರಿಗೆ ಕುಡಿವಯುವ ನೀರು ದೊರೆಯುತ್ತದೆ ಎನ್ನುವ ಉದ್ದೇಶದಿಂದ ನೀರು ಬಿಡಿಸಲು ಮನವಿ ಮಾಡಲಾಗಿತ್ತು.
‘ಪಟ್ಟಣದಲ್ಲಿ ಇರುವ ನೀರಿನ ಸಮಸ್ಯೆಯನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸತತ ಮನವಿ ಸಲ್ಲಿಸಿ ಕ್ರಮಕೈಗೊಳ್ಳಲಾಗಿದೆ’ ಎಂದು ತಹಶೀಲ್ದಾರ್ ಶಶಿಕಲಾ ಪಾದಗಟ್ಟಿ ಮತ್ತು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಯಾಗಿದ್ದ, ಬೆಳಗಾವಿಗೆ ವರ್ಗಾವಣೆಗೊಂಡಿರುವ ಸಂತೋಷರೆಡ್ಡಿ ತಿಳಿಸಿದರು.
ನಾರಾಯಣಪುರ ಜಲಾಶಯದ ಎಡದಂಡೆ ಕಾಲುವೆಯ ಜೇವರ್ಗಿ ಶಾಖಾ ಕಾಲುವೆಯ ಮೂಲಕ ಸರಡಗಿ ಬ್ಯಾರೇಜ್ಗೆ 0.70 ಟಿಎಂಸಿ ಅಡಿ ನೀರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಹರಿಸಲು ಜಿಲ್ಲಾಧಿಕಾರಿ ಆದೇಶಿಸಿದ್ದರು.
ಜೇವರ್ಗಿ ಶಾಖಾ ಕಾಲುವೆ ಮೂಲಕ ಸರಡಗಿ ಬ್ಯಾರೇಜ್ಗೆ ಮುಖ್ಯ ಎಂಜಿನಿಯರ್, ಕೆಬಿಜೆಎನ್ಎಲ್ ಅಧಿಕಾರಿಗಳು ಅನುಮತಿ ನೀಡಿರುವ 0.50 ಟಿಎಂಸಿ ಅಡಿ ನೀರನ್ನು ಜ.15ರಿಂದ ಜಾರಿಗೆ ಬರುವಂತೆ ಹರಿಸಲು ಆದೇಶಿಸಲಾಗಿತ್ತು.
6 ಟಿಎಂಸಿ ಅಡಿ ನೀರಿಗಾಗಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿತ್ತು. ಈಗ ನೀರು ಬಂದಿದೆ. ನೀರಿನ ಸಮಸ್ಯೆಯಾಗದಂತೆ ಮತ್ತೆ 20 ಹಳ್ಳಿಗಳನ್ನು ಆಯ್ಕೆ ಮಾಡಿಕೊಂಡಿದ್ದೇವೆ. ತೊಂದರೆಯಾದರೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿಸುತ್ತೇವೆ- ಶಶಿಕಲಾ ಬಾದಗಟ್ಟಿ ತಹಶೀಲ್ದಾರ್ ಯಡ್ರಾಮಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.