ಕೆರಗೋಡು: ಚರಂಡಿಗಳಲ್ಲಿ ನಿಂತ ಕೊಳಚೆ ನೀರು... ಗ್ರಾಮದ ನಡುವೆಯೇ ಸಗಣಿ ಗುಡ್ಡೆಗಳ ರಾಶಿ... ಡಾಂಬರು ಕಾಣದ ಮಣ್ಣಿನ ರಸ್ತೆಗಳು...ಇಲ್ಲಿಗೆ ಸಮೀಪದ ಆಲಕೆರೆ ಗ್ರಾಮದಲ್ಲಿ ಸಂಚರಿಸಿದಾಗ ಕಂಡು ಬಂದ ದೃಶ್ಯಗಳಿವು.
ಆಲಕೆರೆ ಗ್ರಾಮವು ಜಿಲ್ಲಾ ಕೇಂದ್ರದಿಂದ15 ಕಿ. ಮೀ. ದೂರದಲ್ಲಿದೆ. ಗ್ರಾಮದಲ್ಲಿ 527 ಕುಟುಂಬಗಳಿದ್ದು, 2 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇದೆ. ಪ್ರೌಢ ಹಾಗೂ ಕಾಲೇಜು ಶಿಕ್ಷಣಕ್ಕೆ ಕೀಲಾರ, ಬೆಸಗರಹಳ್ಳಿ, ಅಥವಾ ಮಂಡ್ಯಕ್ಕೆ ಹೋಗಬೇಕು. ಬಸ್ ಸಂಚಾರ ಸಮರ್ಪಕವಾಗಿದೆ.
ಗ್ರಾಮದಲ್ಲಿ ಇತಿಹಾಸ ಪ್ರಸಿದ್ಧ ವೀರಭದ್ರೇಶ್ವರ ದೇವಸ್ಥಾನವಿದೆ. ಇಲ್ಲಿ ನಡೆಯುವ ಕೊಂಡೋತ್ಸವ ರಾಜ್ಯದಲ್ಲೇ ಹೆಸರುವಾಸಿಯಾಗಿದೆ. ರೈತರ ವ್ಯವಸಾಯೋತ್ಪನ್ನ ಕಚೇರಿ ಮತ್ತು ಪಶು ವೈದ್ಯಕೀಯ ಆಸ್ಪತ್ರೆ ಉಪ ಕೇಂದ್ರವಿದೆ.
ಗ್ರಾಮದಲ್ಲಿ 16 ಮಂದಿ ಸದಸ್ಯರಿರುವ ಪಂಚಾಯಿತಿ ಕೇಂದ್ರ ವಿದ್ದು, ಗ್ರಾಮದವರೇ 7 ಮಂದಿ ಸದಸ್ಯ ರಿದ್ದಾರೆ. ಗ್ರಾಮದ ಹಲವು ಬೀದಿಗಳಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲ. ನೀರು ಹರಿದು ಮುಂದೆ ಸಾಗುವುದಿಲ್ಲ. ಇನ್ನೂ ಕೆಲವು ಕಡೆ ಚರಂಡಿಗಳೇ ಇಲ್ಲ.
ಚರಂಡಿಯಲ್ಲಿ ಕಲ್ಲು, ಮಣ್ಣು ಹಾಗೂ ಕಸ ಹಾಕುವುದರಿಂದಾಗಿ ನೀರು ಹರಿದು ಮುಂದೆ ಸಾಗುತ್ತಿಲ್ಲ. ಸ್ವಚ್ಛತೆ ಕಾರ್ಯ ಕೈಗೊಳ್ಳುವಲ್ಲಿ ಗ್ರಾಮ ಪಂಚಾಯಿತಿ ಹಿಂದೆ ಬಿದ್ದಿದೆ.
ಗ್ರಾಮದ ನಡುವೆಯೇ ಇರುವ ಸೆಗಣಿ ಗುಡ್ಡೆಗಳ ರಾಶಿ ಹೆಚ್ಚಾಗಿ ಅನೈರ್ಮಲ್ಯಕ್ಕೆ ಕಾರಣವಾಗಿದೆ. ಸೆಗಣಿ ರಾಶಿ ಹಾಕಿರುವವರಿಗೆ ನೋಟಿಸ್ ನೀಡುವ ಕೆಲಸವನ್ನು ಗ್ರಾಮ ಪಂಚಾಯಿತಿ ಮಾಡಿದೆ. ಆದರೆ, ಹೊರಗಡೆ ಹಾಕಿಸುವ ಕೆಲಸ ಇನ್ನೂ ಆಗಿಲ್ಲ. ಗ್ರಾಮದ ಬಹುತೇಕ ರಸ್ತೆಗಳು ಇನ್ನೂ ಡಾಂಬರು ಭಾಗ್ಯ ಕಂಡಿಲ್ಲ.
ಕಾಲೊನಿ ರಸ್ತೆಗಳು ಸಿಮೆಂಟ್ನಿಂದ ನಿರ್ಮಿಸಲಾಗಿದೆ. ಸ್ವಚ್ಛ ಭಾರತ ಅಭಿಯಾನ ದೇಶದೆಲ್ಲೆಡೆ ಸದ್ದು ಮಾಡುತ್ತಿದ್ದರೂ, ಇಲ್ಲಿಯ 80 ಕುಟುಂಬದವರು ಶೌಚಾಲಯ ನಿರ್ಮಿಸಿ ಕೊಂಡಿಲ್ಲ. ಶೌಚಾಲಯ ನಿರ್ಮಿಸಿಕೊಳ್ಳುವಂತೆ ಮನವಿ ಮಾಡಿಕೊಳ್ಳಲಾಗಿದೆ. ಈಗಾ ಗಲೇ ನಿರ್ಮಿಸಿಕೊಂಡವರಿಗೆ ಹಣ ಬಿಡುಗಡೆಯಾಗದಿರುವುದರಿಂದ ಉಳಿದವರೂ ನಿರ್ಮಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎನ್ನುತ್ತಾರೆ ಪಿಡಿಒ ವೆಂಕಟಯ್ಯ.
ಗ್ರಾಮ ಪಂಚಾಯಿತಿ ಕೇಂದ್ರವಾಗಿದ್ದರೂ ನಿರೀಕ್ಷಿಸಿದಷ್ಟು ಅಭಿವೃದ್ಧಿ ಆಗಿಲ್ಲ. ಸುಸಜ್ಜಿತ ರಸ್ತೆ, ಉತ್ತಮ ಚರಂಡಿ, ನೈರ್ಮಲ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು ಎನ್ನುವುದು ಗ್ರಾಮಸ್ಥರ ಆಗ್ರಹ.