ಹಾಸನ: ರಜೆ ಎಂದರೇ ಸಾಕು ಬೈಕ್ನಲ್ಲಿ ಸುತ್ತುವವರ ನಡುವೆ ‘ಪ್ರಜಾಪ್ರಭುತ್ವದ ಹಬ್ಬ’ದಲ್ಲಿ ಮತದಾರರಲ್ಲಿ ಮತದಾನದ ಅರಿವು ಮೂಡಿಸುವ ಕಾರ್ಯದಲ್ಲಿ ಬೆಂಗಳೂರಿನ ಪ್ರಯೋಗಾಲಯ ತಂತ್ರಜ್ಞ ಬಸವರಾಜು ಎಸ್. ಕಲ್ಲುಸಕ್ಕರೆ ತೊಡಗಿಸಿಕೊಂಡಿದ್ದಾರೆ.
ಬಸವರಾಜು ಎಸ್. ಕಲ್ಲುಸಕ್ಕರೆ ತಮ್ಮ ಅವೆಂಜರ್ ಬೈಕ್ನಲ್ಲಿ ಮತದಾನ ಜಾಗೃತಿ ಮೂಡಿಸಲು ರಾಜ್ಯವ್ಯಾಪಿ ಸಂಚಾರ ಆರಂಭಿಸಿದ್ದಾರೆ. ಬೆಂಗಳೂರಿನಿಂದ ಆರಂಭಗೊಂಡ ಇವರ ಪ್ರಯಾಣ ಈಗಾಗಲೇ 23 ಜಿಲ್ಲೆಗಳನ್ನು ಪೂರ್ಣಗೊಳಿಸಿದ್ದು, ಮಾರ್ಗ ಮಧ್ಯೆ ಸಿಗುವ ಸರ್ಕಾರಿ ಶಾಲೆ, ಕಾಲೇಜು ಮತ್ತು ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಮತದಾನದ ಮಹತ್ವ ವಿವರಿಸುತ್ತಿದ್ದಾರೆ.
ಈ ವರೆಗೆ 4,500 ಕಿ.ಮೀ. ಕ್ರಮಿಸಿರುವ ಬಸವರಾಜ್, ಮತದಾನ ಜಾಗೃತಿಗಾಗಿ ಆಕರ್ಷಕ ವೇತನವಿದ್ದ ಉದ್ಯೋಗ ತೊರೆದಿದ್ದಾರೆ. ಮಂಗಳವಾರ ಹಾಸನದ ತಾಲ್ಲೂಕು ಪಂಚಾಯತಿ, ಗ್ರಾಮ ಪಂಚಾಯಿತಿ ಹಾಗೂ ಜನ ಸಂದಣೆ ಹೆಚ್ಚಿರುವ ಸ್ಥಳದಲ್ಲಿ ಮತದಾನದ ಅರಿವು ಮೂಡಿಸಿದರು.
‘ಈಗಾಗಲೇ ಆರು ಸಾವಿರ ಕರಪತ್ರ ವಿತರಿಸಿದ್ದೇನೆ. ಬಾಕಿ ಇರುವ ಆರು ಜಿಲ್ಲೆಗಳಿಗೆ ಪ್ರಯಾಣ ಬೆಳಸಿ, ಕೊನೆಗೆ ಬೆಂಗಳೂರು ತಲುಪಲಿದ್ದೇನೆ’ ಎಂದರು ಬಸವರಾಜು.
‘ಸುದೀರ್ಘ ರಜೆ ನೀಡಲು ಕೆಲಸ ಮಾಡುತ್ತಿದ್ದ ಲ್ಯಾಬ್ ಮಾಲೀಕರು ಒಪ್ಪದ ಹಿನ್ನೆಲೆಯಲ್ಲಿ ಕೆಲಸ ತ್ಯಜಿಸಿ, ಸಂಪಾದನೆ ಮಾಡಿದ್ದ ₹ 40 ಸಾವಿರ ಹಣವನ್ನು ಈ ಕಾರ್ಯಕ್ಕೆ ವ್ಯಯಿಸಿ, ಜಾಗೃತಿ ಮೂಡಿಸುತ್ತಿದ್ದೇನೆ. ಮತದಾನ ಮುಗಿದ ಬಳಿಕ ಮತ್ತೆ ಬೇರೆ ಉದ್ಯೋಗ ಸೇರುತ್ತೇನೆ’ ಎಂದು ಹೇಳಿದರು.