ನವದೆಹಲಿ: ‘ಲೋಕಸಭೆಗೆ ಹೊಸದಾಗಿ ಆಯ್ಕೆಯಾಗಿ, ದೆಹಲಿಗೆ ಬರುವ ಸಂಸದರಿಗೆ ಈ ಬಾರಿ ಹೋಟೆಲ್ಗಳ ಬದಲು, ರಾಜ್ಯ ಭವನಗಳು ಮತ್ತು ವೆಸ್ಟರ್ನ್ ಕೋರ್ಟ್ ಪಕ್ಕದಲ್ಲಿ ಕಟ್ಟಿರುವ ಹೊಸ ಕಟ್ಟಡದಲ್ಲಿ ತಂಗುವ ವ್ಯವಸ್ಥೆ ಕಲ್ಪಿಸಲಾಗುವುದು’ ಎಂದು ಲೋಕಸಭೆಯ ಮಹಾ ಕಾರ್ಯದರ್ಶಿ ಸ್ನೇಹಲತಾ ಶ್ರೀವಾಸ್ತವ ತಿಳಿಸಿದ್ದಾರೆ.
ಲೋಕಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಗುರುವಾರ ನಡೆಯಲಿದ್ದು ಹೊಸದಾಗಿ ಆಯ್ಕೆಯಾಗುವ ಸಂಸದರು ಶುಕ್ರವಾರದಿಂದ ದೆಹಲಿಗೆ ಬರುವ ನಿರೀಕ್ಷೆ ಇದೆ. ಹಿಂದೆ ಹೀಗೆ ದೆಹಲಿಗೆ ಬರುವ ಹೊಸ ಸಂಸದರಿಗೆ ಹೋಟೆಲ್ಗಳಲ್ಲಿ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಲಾಗುತ್ತಿತ್ತು. ಇದು ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗುತ್ತದೆ ಎಂಬ ಕಾರಣಕ್ಕೆ ಇಂಥ ವ್ಯವಸ್ಥೆ ಕಲ್ಪಿಸುವುದನ್ನು ಕೈಬಿಡಬೇಕು ಎಂಬ ಒತ್ತಾಯವೂ ಬರುತ್ತಿತ್ತು.
‘ರಾಜ್ಯ ಭವನಗಳು ಮತ್ತು ವೆಸ್ಟರ್ನ್ ಕೋರ್ಟ್ ಕಟ್ಟದಲ್ಲಿ ವ್ಯವಸ್ಥೆ ಕಲ್ಪಿಸುವ ಮೂಲಕ ಹೋಟೆಲ್ಗಳಲ್ಲಿ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸುವ ಸಂಪ್ರದಾಯವನ್ನು ಈ ಬಾರಿಯಿಂದ ಕೊನೆಗೊಳಿಸಲಾಗುತ್ತಿದೆ’ ಎಂದು ಶ್ರೀವಾಸ್ತವ ಅವರು ತಿಳಿಸಿದ್ದಾರೆ.