ಅಯೋಧ್ಯೆ: ಖ್ಯಾತ ನಟ ಅಮಿತಾಭ್ ಬಚ್ಚನ್ ಅವರು ರಾಮ ಮಂದಿರಕ್ಕೆ ತೆರಳಿ ಶುಕ್ರವಾರ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಇಲ್ಲಿನ ವಿಮಾನ ನಿಲ್ದಾಣಕ್ಕೆ ಮಧ್ಯಾಹ್ನ ಬಂದ ಅವರು, ನೇರವಾಗಿ ದೇವಾಲಯಕ್ಕೆ ತೆರಳಿ ಭಗವಂತನ ದರ್ಶನ ಪಡೆದರು. ದೇವಾಲಯದ ಆವರಣದಲ್ಲೇ ಸುಮಾರು ಅರ್ಧ ತಾಸು ಇದ್ದ ಬಚ್ಚನ್, ಹೊರಗಿನಿಂದಲೂ ಮಂದಿರದ ವಿನ್ಯಾಸವನ್ನು ಕಣ್ತುಂಬಿಕೊಂಡರು.
ಬಳಿಕ ಫೈಜಾಬಾದ್ ನಗರದಲ್ಲಿರುವ ಅಯೋಧ್ಯೆಯ ಆಯುಕ್ತ ಗೌರವ್ ದಯಾಳ್ ಅವರ ಅಧಿಕೃತ ನಿವಾಸಕ್ಕೆ ಮಧ್ಯಾಹ್ನದ ಊಟಕ್ಕೆ ತೆರಳಿದರು. ಈ ವೇಳೆ ಅಯೋಧ್ಯೆ ಜಿಲ್ಲಾಧಿಕಾರಿ ನಿತೀಶ್ ಕುಮಾರ್, ಐಜಿಪಿ ಪ್ರವೀಣ್ ಕುಮಾರ್, ಎಸ್ಎಸ್ಪಿ ರಾಜ್ಕರಣ್ ನಯ್ಯಾರ್ ಮತ್ತು ಪೌರಾಯುಕ್ತ ವಿಶಾಲ್ ಸಿಂಗ್ ಮತ್ತು ಇನ್ನಿತರ ಹಿರಿಯ ಅಧಿಕಾರಿಗಳು ಇದ್ದರು.
ಬಚ್ಚನ್ ಅವರು, ರಾಮ ಮಂದಿರದಲ್ಲಿ ಜನವರಿ 22ರಂದು ನಡೆದ ಬಾಲರಾಮನ ಪ್ರಾಣಪ್ರತಿಷ್ಠಾಪನಾ ಕಾರ್ಯಕ್ರಮದಲ್ಲೂ ಭಾಗವಹಿಸಿದ್ದರು.