‘ಶಾಖಾಹಾರಿ’ ಸಿನಿಮಾದ ಸಂಗೀತ ನಿರ್ದೇಶಕ ಮಯೂರ್ ಅಂಬೆಕಲ್ಲು ಈಗ ನಿರ್ದೇಶಕರಾಗಿದ್ದಾರೆ. ಇವರ ನಿರ್ದೇಶನದಲ್ಲಿ ಹೊಸಬರಾದ ತೇಜಸ್ ಕಿರಣ್ ಹಾಗೂ ಆರೋಹಿ ನೈನಾ ಜೋಡಿಯಾಗಿ ನಟಿಸಿರುವ ‘ಭಾವತೀರ ಯಾನ’ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ.
‘ಇಂದಿನ ಯುವಕ, ಯುವತಿಯರ ಭಾವನೆ, ಪ್ರೀತಿಯ ಹಾಡು ಪಾಡು, ನೋವು ನಲಿವುಗಳನ್ನು ತೆರೆದಿಡುವ ಕಥೆ. ವರ್ಷದ ಹಿಂದೆ ‘ಫಸ್ಟ್ ಲವ್’ ಎಂಬ ಕಿರುಚಿತ್ರ ಮಾಡಿದ್ದೆವು. ಅದರ ಮುಂದುವರಿದ ಭಾಗ ಈ ಸಿನಿಮಾ’ ಎಂದರು ನಿರ್ದೇಶಕ ಮಯೂರ್.
ಆರೋಹಾ ಫಿಲ್ಮ್ಸ್ ಚಿತ್ರವನ್ನು ನಿರ್ಮಿಸಿದೆ. ಹಿರಿಯ ಕಲಾವಿದರಾದ ರಮೇಶ್ ಭಟ್ ಹಾಗೂ ವಿದ್ಯಾಮೂರ್ತಿ ತಾರಾಗಣದಲ್ಲಿದ್ದಾರೆ.
‘ನನ್ನ 50 ವರ್ಷಗಳ ಸಿನಿಮಾ ಪಯಣದಲ್ಲಿ ಸ್ವೀಟ್ಸ್, ಬೊಕ್ಕೆ ತಂದು ಪಾತ್ರ ಕೊಟ್ಟವರು ತುಂಬಾ ವಿರಳ. ಈ ಹುಡುಗರು ನನಗೆ ಅಷ್ಟು ಗೌರವ ಕೊಟ್ಟರು. ಮನುಷ್ಯನಿಗೆ ಪ್ರಬುದ್ಧತೆ ಬಂದಮೇಲೆ ತಾನು ಮಾಡಿದ ಸರಿ ತಪ್ಪುಗಳನ್ನು ಅವಲೋಕಿಸುವ ಸಮಯ ಬಂದಿರುತ್ತದೆ. ಮನದ ತೊಳಲಾಟಗಳನ್ನು ವ್ಯಕ್ತಪಡಿಸುವ ನನ್ನ ಈ ಪಾತ್ರ ಪ್ರತಿಯೊಬ್ಬರಿಗೂ ಕನೆಕ್ಟ್ ಆಗುತ್ತದೆ’ ಎಂದರು ರಮೇಶ್ ಭಟ್.