ಇಲ್ಲೊಬ್ಬರು ‘ನಾನೇ ಹೀರೋ’ ಎಂದುಕೊಂಡು, ಉಪೇಂದ್ರ ರೀತಿಯದ್ದೇ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದಾರೆ. ಉಪೇಂದ್ರ ಅವರ ಅಭಿಮಾನಿಯಾಗಿರುವ ಹಗದೂರು ಅಶೋಕ್ ರೆಡ್ಡಿ ನಟನೆಯ ಈ ಸಿನಿಮಾ ಇತ್ತೀಚೆಗಷ್ಟೇ ಸೆಟ್ಟೇರಿದೆ. ಆರ್.ಕೆ.ಗಾಂಧಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಸಿನಿಮಾವನ್ನು ಬೃಂದಾ ವಿದ್ಯಾ ಪಿಕ್ಚರ್ಸ್ ನಿರ್ಮಿಸುತ್ತಿದೆ.
‘ಹಾಸ್ಯಪ್ರಧಾನ ಕಥಾಹಂದರ ಹೊಂದಿರುವ ಚಿತ್ರವಿದು. ಉಪ್ಪಿ ಅಭಿಮಾನಿಯೊಬ್ಬ ಚಿತ್ರರಂಗದಲ್ಲಿ ನಾಯಕನಾಗಬೇಕೆಂದು ಹೊರಟು, ಅದಕ್ಕಾಗಿ ಏನೇನೆಲ್ಲ ಸಾಹಸ ಮಾಡುತ್ತಾನೆ ಎಂಬ ಕಥಾಹಂದರ ಈ ಚಿತ್ರದಲ್ಲಿದೆ’ ಎಂದರು ನಿರ್ದೇಶಕರು.
ಶೋಭ ಈ ಚಿತ್ರದ ನಾಯಕಿ. ಶೋಭರಾಜ್, ಶಶಿಕುಮಾರ್ ಮುಂತಾದವರು ನಟಿಸುತ್ತಿದ್ದಾರೆ. ಪ್ರಮೋದ್ ಭಾರತೀಯ ಛಾಯಾಚಿತ್ರಗ್ರಹಣ, ಎಂ. ಎಲ್. ರಾಜ ಸಂಗೀತ, ವಿನಯ್ ಸಂಕಲನ ಈ ಚಿತ್ರಕ್ಕಿದೆ. ಹೊಸಕೋಟೆ, ಚಿಂತಾಮಣಿ ಮತ್ತು ಗಾಂಧಿನಗರಗಳಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ.