ಲೂಸ್ ಮಾದ ಯೋಗಿ, ರಮ್ಯಾ ಜೋಡಿಯಾಗಿ ನಟಿಸಿದ್ದ ‘ಸಿದ್ಲಿಂಗು’ ಹೊಸ ರೀತಿಯ ನಿರೂಪಣೆಯಿಂದ ಜನಮನ್ನಣೆ ಗಳಿಸಿತ್ತು. ಆ ಸಿನಿಮಾ ತೆರೆಕಂಡು 12 ವರ್ಷಗಳ ಬಳಿಕ ‘ಸಿದ್ಲಿಂಗು-2’ ಸೆಟ್ಟೇರಿದೆ. ‘ತೋತಾಪುರಿ’ ಬಳಿಕ ನಿರ್ದೇಶಕ ವಿಜಯ್ ಪ್ರಸಾದ್ ‘ಸಿದ್ಲಿಂಗು’ ಸೀಕ್ವೆಲ್ ಕಥೆಯನ್ನು ಕೈಗೆತ್ತಿಕೊಂಡಿದ್ದಾರೆ.
‘ಜಮಾಲಿಗುಡ್ಡ’ ಚಿತ್ರದ ನಿರ್ಮಾಪಕ ಶ್ರೀಹರಿ ರೆಡ್ಡಿ ನಿಹಾರಿಕಾ ಫಿಲ್ಮ್ಸ್ ಅಡಿಯಲ್ಲಿ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ‘ಸಿದ್ಲಿಂಗು ಹಾಸ್ಯ, ಸಂಬಂಧಗಳು, ಪ್ರೀತಿ, ಭಾವನೆಗಳಿಂದ ಜನರ ಮೆಚ್ಚುಗೆ ಗಳಿಸಿತ್ತು. ಇಲ್ಲಿ ಬರೀ ಮೀನಿಂಗ್ ಇರಲಿದೆ. ನನ್ನ ಹಿಂದಿನ ಸಿನಿಮಾಗಳಂತೆ ಡಬಲ್ ಮೀನಿಂಗ್ ಇರುವುದಿಲ್ಲ’ ಎಂದರು ನಿರ್ದೇಶಕರು.
ಅಂದಹಾಗೆ ಈ ಚಿತ್ರದಲ್ಲಿ ರಮ್ಯಾ ಜಾಗಕ್ಕೆ ‘ಕಿರಗೂರಿನ ಗಯ್ಯಾಳಿಗಳು’ ಖ್ಯಾತಿಯ ಸೋನುಗೌಡ ಬಂದಿದ್ದಾರೆ. ಮೊದಲ ಭಾಗದಲ್ಲಿ ಜನಪ್ರಿಯವಾಗಿದ್ದ ಆಂಡಾಳಮ್ಮನ ಪಾತ್ರ ಕೂಡ ಇರಲಿದೆ ಎಂದು ಚಿತ್ರತಂಡ ಹೇಳಿದೆ.
ಅನೂಪ್ ಸೀಳಿನ್ ಸಂಗೀತ, ಅರಸು ಅಂತಾರೆ ಸಾಹಿತ್ಯ ಚಿತ್ರಕ್ಕಿರಲಿದ್ದು, ಪದ್ಮಜಾ ರಾಜ್, ಆಂಟೋನಿ ಕಮಲ್, ಮಹಾಂತೇಶ್ ಸೇರಿದಂತೆ ದೊಡ್ಡ ತಾರಾಗಣವಿದೆ. ಏಪ್ರಿಲ್ ಮೊದಲ ವಾರದಿಂದ ಚಿತ್ರೀಕರಣ ಶುರುವಾಗಲಿದ್ದು, ಬೆಂಗಳೂರು ಹಾಗೂ ಮೈಸೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ನಡೆಸಲು ತಂಡ ನಿರ್ಧರಿಸಿದೆ.