* ‘ಮಫ್ತಿ’ ಚಿತ್ರದ ಬಗ್ಗೆ ಹೇಳಿ.
ಇದು ಒಬ್ಬ ಪೊಲೀಸ್ ಮತ್ತು ಡಾನ್ ನಡುವೆ ನಡೆಯುವ ಕಥಾನಕ. ಆದರೆ, ಪೊಲೀಸ್ ಮತ್ತು ಡಾನ್ ಯಾರೆಂಬ ಬಗ್ಗೆ ಎಲ್ಲಿಯೂ ಹೇಳಿಲ್ಲ. ಟ್ರೇಲರ್ನಲ್ಲೂ ಗುಟ್ಟು ಬಿಟ್ಟುಕೊಟ್ಟಿಲ್ಲ. ಚಿತ್ರ ನೋಡಿದರಷ್ಟೇ ಇದು ತಿಳಿಯಲಿದೆ. ಲೊಕೇಶನ್ ಬ್ಯಾಕ್ಡ್ರಾಪ್ ಕೂಡ ಭಿನ್ನವಾಗಿದೆ. ಜತೆಗೆ, ಕಥೆಗೆ ತಕ್ಕಂತೆ ಸಂಭಾಷಣೆ ಬರೆಯಲಾಗಿದೆ. ಚಿತ್ರದಲ್ಲಿ ಮಾತು ಕಡಿಮೆ. ಪಾತ್ರಗಳಿಗೆ ಹೆಚ್ಚಿನ ಒತ್ತು ಸಿಕ್ಕಿದೆ. ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎನ್ನುವ ನಂಬಿಕೆ ಇದೆ.
* ‘ಹ್ಯಾಟ್ರಿಕ್ ಹೀರೊ’ ಶಿವರಾಜ್ಕುಮಾರ್ ಅವರೊಂದಿಗೆ ಕೆಲಸ ಮಾಡಿದ ಅನುಭವ ಹೇಗಿತ್ತು?
ಚಿತ್ರದಲ್ಲಿ ಶಿವಣ್ಣ ಅವರದು ಡಾರ್ಕ್ ಶೇಡ್ ಇರುವ ಪಾತ್ರ. ಅವರನ್ನು ವಿಭಿನ್ನವಾಗಿ ತೋರಿಸಿದ್ದೇವೆ. ಚಿತ್ರದಲ್ಲಿ ಅವರ ಪ್ರವೇಶ ಕೂಡ ಚೆನ್ನಾಗಿದೆ. ಅವರ ಅಭಿಮಾನಿಗಳಿಗೆ ಇಷ್ಟವಾಗಲಿದೆ. ಅವರೊಂದಿಗೆ ಮಾಡಿದ ಕೆಲಸ ಖುಷಿ ಕೊಟ್ಟಿತು. ಅಲ್ಲದೆ, ನಾನು ಸಾಕಷ್ಟು ಕಲಿತೆ. ಶಿವರಾಜ್ಕುಮಾರ್ ಮತ್ತು ಶ್ರೀಮುರಳಿ ಉತ್ತಮ ಸಹಕಾರ ನೀಡಿದರು. ಅವರಿಬ್ಬರೊಟ್ಟಿಗೆ ಮೊದಲ ಪ್ರಾಜೆಕ್ಟ್ ಸಿಕ್ಕಿರುವುದು ನನ್ನ ಅದೃಷ್ಟ. ಇದಕ್ಕಿಂತ ಖುಷಿ ಬೇರೊಂದಿಲ್ಲ.
* ನಿಮ್ಮ ನಿರ್ದೇಶನದ ಅನುಭವ ಕುರಿತು ಹೇಳಿ.
‘ಉಗ್ರಂ’ ಚಿತ್ರದಲ್ಲಿ ಸಹಾಯಕ ಛಾಯಾಗ್ರಾಹಕನಾಗಿ ಕೆಲಸ ಮಾಡಿದ್ದೇನೆ. ಜತೆಗೆ, ಆ ಚಿತ್ರದ ನಿರ್ದೇಶನ ವಿಭಾಗದಲ್ಲೂ ದುಡಿದ ಅನುಭವವಿದೆ. ಮುರಳಿ ಸರ್ ಅವರೇ ಚಿತ್ರ ನಿರ್ದೇಶನ ಮಾಡುವಂತೆ ಪ್ರೋತ್ಸಾಹ ನೀಡಿದರು. ಹಾಗಾಗಿ ಪೊಲೀಸ್, ಭೂಗತ ಲೋಕದ ನಡುವಿನ ಕಥೆ ಜನ್ಮ ತಳೆಯಿತು. ಅವರೊಂದಿಗೆ ಈ ಬಗ್ಗೆ ಚರ್ಚಿಸಿದೆ. ಅವರು ಒಪ್ಪಿಗೆ ಸೂಚಿಸಿದ ಫಲವಾಗಿ ‘ಮಫ್ತಿ’ ತೆರೆಗೆ ಬರುತ್ತಿದೆ.
* ಚಿತ್ರೀಕರಣದ ಅನುಭವ ಕುರಿತು ಹೇಳಿ.
ಶ್ರೀಮುರಳಿ ಅವರು ರೈಲಿನಲ್ಲಿ ನಡೆಸಿರುವ ಸಾಹಸ ದೃಶ್ಯ ಗಮನ ಸೆಳೆಯುತ್ತದೆ. ಅವರು ಯಾವುದೇ ಸಹಾಯ ಇಲ್ಲದೆ ಸಹಜವಾಗಿ ಸಾಹಸ ದೃಶ್ಯದಲ್ಲಿ ಅಭಿನಯಿಸಿದ್ದಾರೆ. ಚಿತ್ರದ ಪ್ರತಿ ದೃಶ್ಯ ನೋಡುಗರನ್ನು ಹಿಡಿದಿಡುತ್ತದೆ.
* ‘ಮಫ್ತಿ’ಯಲ್ಲಿ ಸಮಾಜಕ್ಕೆ ಸಂದೇಶ ಇದೆಯೇ?
ಚಿತ್ರದ ಮೂಲಕ ಯಾವುದೇ ಸಂದೇಶ ಹೇಳಲು ಹೊರಟಿಲ್ಲ. ಪ್ರೇಕ್ಷಕರಿಗೆ ಮನರಂಜನೆ ನೀಡುವುದೇ ಪ್ರಥಮ ಆದ್ಯತೆ.
ಕೆಟ್ಟದ್ದನ್ನು ಮಾಡಿದ್ರೂ ಒಳ್ಳೆಯದಕ್ಕೆ ಮಾಡಬೇಕು ಎಂಬುದನ್ನು ಹೇಳಿದ್ದೇವೆ. ಹಾಗೆಂದು ಕೆಟ್ಟ ಕೆಲಸ ಮಾಡಬೇಕೆಂಬುದು ಇದರ ಅರ್ಥವಲ್ಲ. ಚಿತ್ರದಲ್ಲಿ ನಟ ದೇವರಾಜ್, ಪ್ರಕಾಶ್ ಬೆಳವಾಡಿ, ವಸಿಷ್ಟ ಸಿಂಹ ಕೂಡ ಅಭಿನಯಿಸಿದ್ದಾರೆ. ಅವರೆಲ್ಲರೂ ಒಂದು ಸರ್ಕಲ್ನಲ್ಲಿ ಬರುತ್ತಾರೆ. ಕಥೆಗೆ ಪೂರಕವಾಗಿ ಅವರ ಪಾತ್ರಗಳು ಚಲಿಸುತ್ತವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.