ಕಳೆದ ಬುಧವಾರ ರಾತ್ರಿ ಅನಿರೀಕ್ಷಿತವಾಗಿ ಅಮಿತಾಬ್ ಬಚ್ಚನ್ಗೆ ಕರೆ ಮಾಡಿದ್ದ ಪಂ.ರವಿಶಂಕರ್ ಅವರಿಗೆ ತಮ್ಮ ಸಾವಿನ ಬಗ್ಗೆ ಮುನ್ಸೂಚನೆ ಸಿಕ್ಕಿತ್ತೆ? ಎಂಬ ಗುಮಾನಿಯನ್ನು ಬಚ್ಚನ್ ಟ್ವೀಟರ್ನಲ್ಲಿ ತೇಲಿಬಿಟ್ಟಿದ್ದಾರೆ.
ಬುಧವಾರ ರಾತ್ರಿ ಸುಕನ್ಯಾಜಿ ದೂರವಾಣಿ ಕರೆ ಮಾಡಿದ್ದರು. ರವಿಶಂಕರ್ ನನ್ನೊಂದಿಗೆ ಮಾತನಾಡಲು ಬಯಸುತ್ತಾರೆ ಎಂದು ಹೇಳಿ, ಫೋನ್ ಅವರ ಕೈಗೆ ನೀಡಿದ್ದರು. ಇಷ್ಟು ವರ್ಷಗಳ ಕೌಟುಂಬಿಕ ಸ್ನೇಹವಿದ್ದರೂ ರವಿಶಂಕರ್ಜಿ ಕರೆ ಮಾಡಿ ಮಾತನಾಡಿದ್ದು ಇದೇ ಮೊದಲು. ಆದರೆ ಅವರಿಗೆ ತಮ್ಮಶಸ್ತ್ರಚಿಕಿತ್ಸೆಯ ಬಗ್ಗೆ ಆತ್ಮವಿಶ್ವಾಸ ಇದ್ದಂತೆ ಇರಲಿಲ್ಲ. ಅತಿ ಪ್ರೀತಿ ಮತ್ತು ವಾತ್ಸಲ್ಯಮಯ ಧ್ವನಿಯಲ್ಲಿ ಮಾತನಾಡಿಸಿದ್ದರು. ಸಾಕಷ್ಟು ಹರಸಿದ್ದರು. ಎಲ್ಲರನ್ನೂ ವಿಚಾರಿಸಿದ್ದರು. ನಂತರ `ಗುರುವಾರ ಬೆಳಿಗ್ಗೆ ಶಸ್ತ್ರಚಿಕಿತ್ಸೆ ಇದೆ. ನೋಡುವ... ಏನಾಗುವುದೆಂದು..? ಅದಕ್ಕೆ ಮೊದಲೇ ಮಾತನಾಡಬೇಕೆಂದಿದ್ದೆ.
ಸಂತೋಷವೆನಿಸಿತು. ಮತ್ತಿನ್ನು ಮಾತನಾಡಲು ಸಾಧ್ಯವಿಲ್ಲವೇನೋ' ಎನ್ನುತ್ತಲೇ ತಮ್ಮ ಆತಂಕವನ್ನು ವ್ಯಕ್ತಪಡಿಸಿದ್ದರು' ಎಂದು ಅಮಿತಾಬ್ ಹೇಳಿದ್ದಾರೆ.
ಒಬ್ಬ ವ್ಯಕ್ತಿ ತನ್ನ ಅಂತ್ಯದ ಬಗ್ಗೆ ಹೀಗೆಲ್ಲ, ಸೂಚನೆ ನೀಡುವುದೇ ಸೋಜಿಗ ಎನಿಸುತ್ತದೆ. ಅಥವಾ ಅವರ ಮರಣದ ನಂತರ ನಾವೇ ಹೀಗೆ ಯೋಚಿಸುತ್ತೇವೆಯೇ? ಎಂಬೆಲ್ಲ ಪ್ರಶ್ನೆಗಳನ್ನು ಬಚ್ಚನ್ ಕೇಳಿದ್ದಾರೆ.