ತಮ್ಮ ಧಾರಾವಾಹಿಗಳ ಮೂಲಕ ಪ್ರವೇಶ ಪಡೆದ ಶ್ರೀನಗರ ಕಿಟ್ಟಿ ಕತೆಯನ್ನೂ ಕೇಳದೆ ಚಿತ್ರವನ್ನು ಒಪ್ಪಿಕೊಂಡು ನಟಿಸಿರುವುದು ನಾರಾಯಣ್ ಖುಷಿಗೆ ಕಾರಣವಾಗಿದೆ. `ಸಂಜು ವೆಡ್ಸ್ ಗೀತಾ' ಚಿತ್ರದ ನಟನೆ ಅವರನ್ನು `ಅಪ್ಪಯ್ಯ' ಚಿತ್ರದ ಪಾತ್ರಕ್ಕೆ ಆಯ್ಕೆ ಮಾಡುವಂತೆ ಪ್ರೇರೇಪಿಸಿತಂತೆ. `ಶೈಲೂ' ಚಿತ್ರದಲ್ಲಿ ಪರಿಚಯವಾದ ಪ್ರತಿಭಾಂತ ನಟಿ ಭಾಮಾ ನಾಯಕಿಯಾಗಿರುವುದೂ ಅವರ ಕತೆಗೆ ಬೆಂಬಲವಾಗಿದೆಯಂತೆ.
ಶ್ರೀನಗರ ಕಿಟ್ಟಿ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಮಾಡುವಾಗ ಕಣ್ಣೀರು ಸುರಿಸಿದರಂತೆ. ಅಷ್ಟು ತೀವ್ರವಾಗಿ ಕಾಡುವ ಪಾತ್ರವನ್ನು ತಮಗೆ ನೀಡಿದ ನಾರಾಯಣ್ ಅವರಿಗೆ ಕಿಟ್ಟಿ ಧನ್ಯವಾದ ಸಲ್ಲಿಸಿದರು. ನಾಯಕಿ ಭಾಮಾ ಕನ್ನಡದಲ್ಲಿ ಮಾತನಾಡಿ ಅಚ್ಚರಿ ಹುಟ್ಟಿಸಿದರು. `ಈ ಚಿತ್ರದಲ್ಲಿ ನನ್ನದು ಗೌರಿ ಪಾತ್ರ. ತುಂಬಾ ಪರಿಣಾಮಕಾರಿಯಾಗಿದೆ. `ಶೈಲೂ' ಚಿತ್ರದಲ್ಲಿ ನನ್ನ ಪಾತ್ರಕ್ಕೆ ಸಿಕ್ಕ ಪ್ರಶಂಸೆ ಈ ಚಿತ್ರದಲ್ಲಿಯೂ ಸಿಗಬಹುದು' ಎಂದು ಹೇಳಿ, ಚಿತ್ರದ `ಸಾವಿರ ಹೂಗಳು ತೆರೆಯಲಿ..' ಹಾಡನ್ನು ಗುನುಗಿದರು.
ಸಮಾರಂಭದ ಕಡೆಯಲ್ಲಿ ಶ್ವೇತವಸ್ತ್ರಧಾರಿ ಮಕ್ಕಳ ನಡುವೆ ಕಡುಗುಲಾಬಿ ಬಣ್ಣದ ಫ್ರಾಕ್ ತೊಟ್ಟು ಬಂದ ಮಗು `ಅಪ್ಪಯ್ಯ' ಚಿತ್ರದ ಸೀಡಿಗಳನ್ನು ಬಿಡುಗಡೆಗೊಳಿಸಿದ್ದು ಕಾರ್ಯಕ್ರಮದ ವಿಶೇಷ.