ಮುಂಬೈ: ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ನೇಮಕಕ್ಕಾಗಿ ಸೋಮವಾರ ಕ್ರಿಕೆಟ್ ಸಲಹಾ ಸಮಿತಿ(ಸಿಎಸಿ)ಯು ಐವರು ಅಭ್ಯರ್ಥಿ ಗಳ ಸಂದರ್ಶನ ನಡೆಸಿತು. ಆದರೆ ಕೋಚ್ ಸ್ಥಾನಕ್ಕೆ ಆಯ್ಕೆಯಾಗಿರುವ ಅಭ್ಯರ್ಥಿಯ ಹೆಸರನ್ನು ಪ್ರಕಟಿಸಿಲ್ಲ.
ಇಲ್ಲಿನ ಬಿಸಿಸಿಐ ಕಚೇರಿಯಲ್ಲಿ ಸೋಮವಾರ ಸಭೆ ಸೇರಿದ ಸಮಿತಿ ಸದಸ್ಯರು ಅರ್ಜಿ ಸಲ್ಲಿಸಿದವರ ಪೈಕಿ ಐವರ ಸಂದರ್ಶನ ನಡೆಸಿತು. ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಜೊತೆ ಚರ್ಚೆ ನಡೆಸಿದ ನಂತರವೇ ಮುಂದಿನ ಹೆಜ್ಜೆ ಇರಿಸಲು ಸಮಿತಿ ನಿರ್ಧರಿಸಿತು.
ಕೊಹ್ಲಿ ಜೊತೆಗಿನ ಭಿನ್ನಾಭಿಪ್ರಾಯ ದಿಂದಾಗಿ ಅನಿಲ್ ಕುಂಬ್ಳೆ, ಕೋಚ್ ಹುದ್ದೆಗೆ ರಾಜೀನಾಮೆ ನೀಡಿದ ನಂತ ರದ ಪರಿಸ್ಥಿತಿಯ ಗಾಂಭೀರ್ಯವನ್ನು ಸಮಿತಿ ಅರ್ಥಮಾಡಿಕೊಂಡಿರುವುದೇ ಈ ನಡೆಗೆ ಕಾರಣ ಎಂದು ಹೇಳಲಾಗಿದೆ.
ಸಭೆಯ ನಂತರ ಮಾತನಾಡಿದ ಸಮಿತಿಯ ಸದಸ್ಯ ಸೌರವ್ ಗಂಗೂಲಿ ‘ಆತುರದ ನಿರ್ಧಾರ ಕೈಗೊಳ್ಳಲು ಸಮಿತಿ ಸಿದ್ಧವಿಲ್ಲ. ಕೋಚ್ ಹೇಗಿರಬೇಕು ಎಂಬುದು ಕೊಹ್ಲಿ ಅವರಿಗೂ ತಿಳಿಯ ಬೇಕಾಗಿರುವುದರಿಂದ ಅವರಿಗೆ ಸಂದೇಶ ಕಳುಹಿಸಲಾಗಿದೆ. ವೆಸ್ಟ್ ಇಂಡೀಸ್ ಪ್ರವಾಸದಿಂದ ವಾಪಸ್ ಬಂದ ನಂತರ ಅವರೊಂದಿಗೆ ಚರ್ಚೆ ನಡೆಸಲಾಗುವುದು’ ಎಂದರು.
‘ನೂತನ ಕೋಚ್ ಎರಡು ವರ್ಷಗಳ ಅವಧಿಗೆ ಕಾರ್ಯನಿರ್ವಹಿಸಬೇಕಾಗಿದೆ. ಆದ್ದರಿಂದ ತರಾತುರಿಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಸುವುದು ಬೇಡ ಎಂಬುದು ಸಮಿತಿಯ ನಿರ್ಧಾರ. ಭಾರತ ಕ್ರಿಕೆಟ್ಗೆ ಉತ್ತಮ ಕೋಚ್ ಅನ್ನು ಕಾಣಿಕೆಯಾಗಿ ನೀಡುವುದು ನಮ್ಮ ಉದ್ದೇಶ. 2019ರ ವಿಶ್ವಕಪ್ ಕ್ರಿಕೆಟ್ ಗಮನದಲ್ಲಿರಿಸಿ ಕೊಂಡು ಆಯ್ಕೆ ಮಾಡಬೇಕಾಗಿರುವುದ ರಿಂದ ನಮಗೆ ಇನ್ನೂ ಸ್ವಲ್ಪ ಸಮಯ ಬೇಕಾಗಿದೆ’ ಎಂದುಸ್ಪಷ್ಟಪಡಿಸಿದರು.
‘ಸಂದರ್ಶನದಲ್ಲಿ ಎಲ್ಲರಿಗೂ ಒಂದೇ ಪ್ರಕಾರದ ಪ್ರಶ್ನೆಗಳನ್ನು ಕೇಳಲಾಗಿತ್ತು. ರಿಚರ್ಡ್ ಪೈಬಸ್ ಮತ್ತು ಟಾಮ್ ಮೂಡಿ ಅತ್ಯುತ್ತಮವಾಗಿ ಉತ್ತರಿಸಿ ದ್ದಾರೆ. ಅವರು ಚೆನ್ನಾಗಿ ಪೂರ್ವಸಿದ್ಧತೆ ಮಾಡಿಕೊಂಡಿದ್ದದ್ದು ಇದರಿಂದ ಸಾಬೀ ತಾಗಿದೆ. ಸೆಹ್ವಾಗ್ ಮತ್ತು ರವಿಶಾಸ್ತ್ರಿ ಕೂಡ ಉತ್ತಮವಾಗಿ ಉತ್ತರಿಸಿದ್ದಾರೆ’ ಎಂದು ಗಂಗೂಲಿ ತಿಳಿಸಿದರು.
ಕೋಚ್ ಹುದ್ದೆಗೆ ಒಟ್ಟು ಹತ್ತು ಮಂದಿ ಅರ್ಜಿ ಸಲ್ಲಿಸಿದ್ದರು. ಈ ಪೈಕಿ ಭಾರತ ತಂಡದ ಮಾಜಿ ನಾಯಕ ರವಿಶಾಸ್ತ್ರಿ, ಸ್ಫೋಟಕ ಬ್ಯಾಟ್ಸ್ಮನ್ ವೀರೇಂದ್ರ ಸೆಹ್ವಾಗ್, ಆಸ್ಟ್ರೇಲಿಯಾದ ಟಾಮ್ ಮೂಡಿ, ಇಂಗ್ಲೆಂಡ್ನ ರಿಚರ್ಡ್ ಪೈಬಸ್ ಮತ್ತು ಭಾರತ ತಂಡದ ಮಾಜಿ ಆಟಗಾರ ಲಾಲ್ಚಂದ್ ರಜಪೂತ್ ಅವರನ್ನು ಸಮಿತಿ ಸಂದರ್ಶನ ನಡೆಸಿತು. ಸೆಹ್ವಾಗ್ ಮಾತ್ರ ಖುದ್ದು ಹಾಜರಾಗಿ ದ್ದರು. ಉಳಿದವರನ್ನು ಸ್ಕೈಪ್ ಮೂಲಕ ಮಾತನಾಡಿಸಲಾಯಿತು.
ವೆಸ್ಟ್ ಇಂಡೀಸ್ನ ಫಿಲಿಪ್ ಸಿಮನ್ಸ್ ಅವರು ಕೂಡ ಪಟ್ಟಿಯಲ್ಲಿ ಇದ್ದರು. ಆದರೆ ಅವರು ಸಂದರ್ಶನಕ್ಕೆ ಲಭ್ಯವಾಗ ಲಿಲ್ಲ. ಬಿಸಿಸಿಐ ಕಚೇರಿಯಲ್ಲಿ ನಡೆದ ಪ್ರಕ್ರಿಯೆಯಲ್ಲಿ ಗಂಗೂಲಿ ಮತ್ತು ಲಕ್ಷ್ಮಣ್ ಹಾಜರಿದ್ದರು. ಸಮಿತಿಯ ಮತ್ತೊಬ್ಬ ಸದಸ್ಯ ಸಚಿನ್ ತೆಂಡೂಲ್ಕರ್ ಸ್ಕೈಪ್ ಮೂಲಕ ಪಾಲ್ಗೊಂಡರು.
ಸಮಿತಿ ಎರಡು ತಾಸು ಕಾಲ ಸೆಹ್ವಾಗ್ ಅವರ ಸಂದರ್ಶನ ನಡೆಸಿತು. ಇದನ್ನು ಮುಗಿಸಿ ಹೊರ ಬಂದ ಸೆಹ್ವಾಗ್ ಅವರನ್ನು ಮಾಧ್ಯಮ ಪ್ರತಿನಿಧಿಗಳು ಮಾತನಾಡಿಸಿದಾಗ ‘ಸದ್ಯದಲ್ಲೇ ಫಲಿ ತಾಂಶ ಗೊತ್ತಾಗಲಿದೆ, ಕಾಯುತ್ತಿರಿ’ ಎಂದು ಹೇಳಿದರು.
ಅರ್ಜಿ ಸಲ್ಲಿಸಿದ ಹತ್ತು ಮಂದಿ ಪೈಕಿ ರವಿಶಾಸ್ತ್ರಿ ಕೋಚ್ ಆಗುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿತ್ತು. ಆದರೆ ಈ ಸಾಧ್ಯತೆ ಕಡಿಮೆ ಎಂಬುದನ್ನು ಸೋಮವಾರದ ಬೆಳ ವಣಿಗೆ ಸೂಚಿಸುತ್ತದೆ ಎಂದು ವಿಶ್ಲೇಷಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.