ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಟುಂಬಗಳು ಬೀದಿಪಾಲು–ಊಟಕ್ಕೂ ಕಷ್ಟ

ಈಜಿಪುರ ವಸತಿ ಸಮುಚ್ಚಯ: ಒಕ್ಕಲೆಬ್ಬಿಸಿ ಕಳೆಯಿತು 4 ವರ್ಷl ನಿವಾಸಿಗಳ ವಸ್ತುಸ್ಥಿತಿ ಅಧ್ಯಯನ ವರದಿ ಬಿಡುಗಡೆ
Last Updated 29 ಜುಲೈ 2017, 19:39 IST
ಅಕ್ಷರ ಗಾತ್ರ

ಬೆಂಗಳೂರು: ಈಜಿಪುರದಲ್ಲಿ ದುರ್ಬಲ ವರ್ಗದವರ ವಸತಿ ಸಮುಚ್ಚಯದ ಜಾಗದಲ್ಲಿದ್ದ ಕುಟುಂಬಗಳನ್ನು ಒಕ್ಕಲೆಬ್ಬಿಸಿ ನಾಲ್ಕು ವರ್ಷಗಳ ಬಳಿಕವೂ ಅನೇಕ ಕುಟುಂಬಗಳು ಬೀದಿಯಲ್ಲಿವೆ. ಒಪ್ಪೊತ್ತಿನ ಊಟವನ್ನು ಹೊಂದಿಸಿಕೊಳ್ಳಲು ಸಂಕಷ್ಟಪಡುತ್ತಿವೆ.

ಈ ವಸತಿ ಸಮುಚ್ಚಯದ ಜಾಗದಲ್ಲಿ  ವಾಸವಿದ್ದ ಕುಟುಂಬಗಳ ಗುಡಿಸಲುಗಳನ್ನು ಬಲವಂತವಾಗಿ ತೆರವುಗೊಳಿಸಿದ ಬಳಿಕ  ಆ ಕುಟುಂಬಗಳು ಎದುರಿಸಿದ ದುಃಸ್ಥಿತಿಗಳ  ಕುರಿತ ವರದಿಯನ್ನು  ಶನಿವಾರ  ಬಿಡುಗಡೆ ಮಾಡಲಾಯಿತು.

ನವದೆಹಲಿಯ  ಹೌಸಿಂಗ್‌ ಆ್ಯಂಡ್‌ ಲ್ಯಾಂಡ್‌ ರೈಟ್ಸ್‌ ನೆಟ್‌ವರ್ಕ್‌, ಬೆಂಗಳೂರಿನ  ಆರ್ಥಿಕ ದುರ್ಬಲ ವರ್ಗದ ಭೂಕಬಳಿಕೆ ವಿರೋಧಿ ವೇದಿಕೆ ಹಾಗೂ ಫೀಲ್ಡ್ಸ್‌ ಆಫ್‌ ವೀವ್‌ ಸಂಸ್ಥೆಗಳು ಸೇರಿ ಈ ಅಧ್ಯಯನ ನಡೆಸಿವೆ.  102 ಕುಟುಂಬಗಳಿಂದ ಮಾಹಿತಿ ಸಂಗ್ರಹಿಸಿ ಸಿದ್ಧಪಡಿಸಿರುವ ವರದಿಯ ಪ್ರಮುಖ ಅಂಶಗಳು ಇಲ್ಲಿವೆ.

ಊಟಕ್ಕೂ ಸಂಕಷ್ಟ: ಇಲ್ಲಿನ ಕುಟುಂಬಗಳ ಆದಾಯ ಗಣನೀಯವಾಗಿ ಕುಸಿದಿದ್ದು, ಇದರಿಂದ  ಆಹಾರ ಪದಾರ್ಥ ಖರೀದಿಗೆ ಹೊಡೆತ ಬಿದ್ದಿದೆ.  ಅಕ್ಕಿಯನ್ನು ಬಳಸುವ ಪ್ರಮಾಣ ಸರಾಸರಿ 10 ಕೆ.ಜಿ.ಯಿಂದ 5 ಕೆ.ಜಿಗೆ ಕುಸಿದಿದೆ. ಅಪೌಷ್ಠಿಕತೆ ಜಾಸ್ತಿ ಆಗಿದೆ.

ಕೆಲಸ ಕಳೆದುಕೊಂಡರು: ಮನೆ ಕಳೆದುಕೊಂಡ ಬಳಿಕ ಕೆಲವರು ಕೆಲಸವನ್ನೂ ಕಳೆದುಕೊಂಡಿದ್ದಾರೆ. ವ್ಯಕ್ತಿಯ ಸರಾಸರಿ ಮಾಸಿಕ ಆದಾಯ ₹5,130ರಿಂದ ₹4,720ಕ್ಕೆ ಕುಸಿದಿದೆ.  ಕುಟುಂಬ ನಿರ್ವಹಣೆ ವೆಚ್ಚ ಸರಾಸರಿ ₹14,392ರಿಂದ 15,366ಕ್ಕೆ ಹೆಚ್ಚಿದೆ.

ಕೆಲಸಕ್ಕಾಗಿ ಪ್ರಯಾಣ: ಕೆಲಸಕ್ಕಾಗಿ ಹೆಚ್ಚು ದೂರ ಪ್ರಯಾಣ ಮಾಡಬೇಕಿದೆ. ಗುಡಿಸಲು ತೆರವಿನ ಬಳಿಕ ಬೇರೆ ಕಡೆಗೆ ವಲಸೆ ಹೋಗಿದ್ದವು. ಕೆಲಸಕ್ಕೆ ಹೋಗಲು  ದೂರವಾಗುತ್ತದೆ ಎಂಬ ಕಾರಣಕ್ಕೆ ಅವು ಮತ್ತೆ  ಹಿಂದಿನ ಜಾಗಕ್ಕೆ ಮರಳಿವೆ.  

ಶಾಲೆ ತೊರೆದ ವಿದ್ಯಾರ್ಥಿಗಳು: ಕುಟುಂಬಗಳು ನೆಲೆ ಕಳೆದುಕೊಂಡ ಬಳಿಕ 22 ವಿದ್ಯಾರ್ಥಿಗಳು   ವಿದ್ಯಾಭ್ಯಾಸವನ್ನು  ಮೊಟಕುಗೊಳಿಸಿದ್ದಾರೆ. ಕೆಲವರು ಪಠ್ಯ ಹಾಗೂ ಟಿಪ್ಪಣಿ ಪುಸ್ತಕಗಳನ್ನು ಕಳೆದುಕೊಂಡಿದ್ದಾರೆ.  ಅನೇಕ ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗಿಲ್ಲ.  ಅನೇಕ ಮಕ್ಕಳು ಕುಟುಂಬಕ್ಕೆ ನೆರವಾಗುವ ಉದ್ದೇಶದಿಂದ ಕೆಲಸಕ್ಕೆ ಹೋಗುತ್ತಿದ್ದಾರೆ.

ಆರೋಗ್ಯ ಕಡೆಗಣನೆ: ನೆಲೆ ಕಳೆದುಕೊಂಡ ಬಳಿಕ ಕುಟುಂಬಗಳು ಆಸ್ಪತ್ರೆಗೆ ಹೋಗುವ ಪ್ರಮಾಣ ಕಡಿಮೆ ಆಗಿದೆ. ಆದರೆ ಕಾಯಿಲೆ ಪ್ರಮಾಣ ಹೆಚ್ಚಿದೆ.  ಮನೆ ಬಾಡಿಗೆ, ಶಾಲಾ ಶುಲ್ಕ, ಊಟಕ್ಕೆ ಹಣ ಸಾಲದ ಕಾರಣ ಆರೋಗ್ಯ ಕಾಳಜಿಯನ್ನು  ಕಡೆಗಣಿಸುತ್ತಿದ್ದಾರೆ.

***

ಪ್ರಮುಖ ಬೇಡಿಕೆಗಳು

*  ಆಗಿರುವ ಆರ್ಥಿಕ ನಷ್ಟ ತುಂಬಿಕೊಡಲು ಪ್ರತಿ ಕುಟುಂಬಕ್ಕೆ ₹ 4 ಲಕ್ಷ ಪರಿಹಾರ ನೀಡಬೇಕು
*  ಅಂತರರಾಷ್ಟ್ರೀಯ ಗುಣಮಟ್ಟದ ಪುನರ್ವಸತಿ ಒದಗಿಸಬೇಕು
*  ಜೀವನ ಭದ್ರತೆ ಕಲ್ಪಿಸಬೇಕು
*  ಮಾನವ ಹಕ್ಕುಗಳನ್ನು ಖಾತರಿಪಡಿಸುವ ಬದ್ಧತೆಯನ್ನು ಸರ್ಕಾರ  ಪ್ರದರ್ಶಿಸಬೇಕು
*  ನಗರಾಭಿವೃದ್ಧಿಗೆ ಎಲ್ಲರನ್ನೂ ಒಳಗೊಳ್ಳುವ ಮಾದರಿಯನ್ನು ಅನುಸರಿಸಬೇಕು. 
*  ವಸತಿ ಹಕ್ಕನ್ನು ಖಾತರಿಪಡಿಸುವ ಕಾನೂನು ರೂಪಿಸಬೇಕು
*  ಈಜಿಪುರದಲ್ಲೇ ಪುನರ್ವಸತಿ ಕಲ್ಪಿಸಬೇಕು.
* ಪುನರ್ವಸತಿ ಕಲ್ಪಿಸುವ ಸಲುವಾಗಿ ಮೇವರಿಕ್‌ ಹೋಲ್ಡಿಂಗ್ಸ್‌ ಜೊತೆ ಮಾಡಿಕೊಂಡಿರುವ ಒಪ್ಪಂದವನ್ನು ಬಿಬಿಎಂಪಿ ರದ್ದುಪಡಿಸಬೇಕು.
*  ಬಲವಂತದ ಒಕ್ಕಲೆಬ್ಬಿಸುವಿಕೆ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು

ನೆಲೆ ಕಳೆದುಕೊಂಡವರ ಬವಣೆಗಳು

ಬೀದಿಬದಿಯಲ್ಲೆ ವಾಸವಿದ್ದೇವೆ. ಇಲ್ಲಿ ವಿಪರೀತ ಇಲಿಕಾಟ. ನನ್ನ ತುಟಿಯನ್ನೂ ಇಲಿ ಕಚ್ಚಿದೆ. ನಿದ್ರೆಯಲ್ಲಿರುವಾಗ ಇಲಿ ಕಚ್ಚಿದರೆ ಗೊತ್ತಾಗದು.  ಬೆಳಿಗ್ಗೆ ಗಾಯ ನೋಡಿದಾಗಲೇ ಇದು ತಿಳಿಯುತ್ತದೆ.
ಜೋಸೆಫ್‌  ಜೆರಾಲ್ಡ್‌

***

ನನ್ನ ತಾಯಿ ಶಾಲೆಯಲ್ಲಿ ಆಯಾ ಆಗಿದ್ದಳು. ಆಕೆಗೆ ಕ್ಷಯರೋಗ ಬಂತು.  ಅದನ್ನು ತಿಳಿದು ಶಾಲೆಯವರು ಕೆಲಸ ಬಿಡಿಸಿದರು.  ನೆಲೆಕಳೆದುಕೊಂಡ ಬಳಿಕ ತಾಯಿಯನ್ನೂ ಕಳೆದುಕೊಂಡೆ.
ಜ್ಯೋತಿ

***

ನಿದ್ರೆ ಮಾಡುವಾಗ ಇಲಿ ಕಚ್ಚಿದ್ದರಿಂದ ರೋಗ ಬಂದು ಗಂಡ ಅಸುನೀಗಿದರು. ಮಗಳು ಪಿಯುಸಿಯಲ್ಲೇ  ಕಲಿಕೆ ನಿಲ್ಲಿಸಿ, ಕುಟುಂಬ ನಿರ್ವಹಣೆಗಾಗಿ ಮನೆ ಕೆಲಸಕ್ಕೆ ಹೋಗುತ್ತಿದ್ದಾಳೆ.
ನಾಗರತ್ನಾ

***

ನಾವು  ಗುಡಿಸಲು ಕಟ್ಟಿಕೊಂಡು ಬೀದಿಬದಿಯಲ್ಲೇ ನೆಲೆಸಿದ್ದೇವೆ.  ಇಲ್ಲಿನ  ಕುಟುಂಬಗಳು ದಮ್ಮು, ಕೆಮ್ಮು, ಜ್ವರ ಸಮಸ್ಯೆ ತಪ್ಪಿದ್ದಲ್ಲ. ಯಾವುದಾದರೂ ಆಸ್ಪತ್ರೆ ಇಲ್ಲಿ  ಆರೋಗ್ಯ ಶಿಬಿರ  ನಡೆಸಲಿ
ಶಾಂತಿ ಮೇರಿ

***

ಮನೆ ಹೋದ ಬಳಿಕ ಗಂಡನಿಗೆ ಏಯ್ಡ್ಸ್‌ ಇದ್ದುದು ಬೆಳಕಿಗೆ ಬಂತು. 3 ತಿಂಗಳ ಹಿಂದೆ ಗಂಡನನ್ನು ಕಳೆದು ಕೊಂಡೆ. ಹೊಟ್ಟೆಪಾಡಿಗಾಗಿ ಈಗ ಮನೆಕೆಲಸಕ್ಕೆ ಹೋಗುತ್ತಿದ್ದೇನೆ.
ಅಮ್ಮು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT