ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲ್ವಾರ್‌ ಪ್ರಕರಣ: ಆರು ಮಂದಿ ದೋಷಮುಕ್ತ

Last Updated 14 ಸೆಪ್ಟೆಂಬರ್ 2017, 19:32 IST
ಅಕ್ಷರ ಗಾತ್ರ

ಜೈಪುರ: ರಾಜಸ್ಥಾನದ ಅಲ್ವಾರ್ ಎಂಬಲ್ಲಿ ಗೋವುಗಳನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದರೆಂದು ಶಂಕಿಸಿ, ಗೋ ರಕ್ಷಕರು ಎನ್ನಲಾದಗುಂಪೊಂದು ಪೆಹ್ಲು ಖಾನ್‌ ಎಂಬುವವರನ್ನು ಹೊಡೆದು ಸಾಯಿಸಿದ್ದ ಘಟನೆಗೆ ಸಂಬಂಧಿಸಿದಂತೆ 6 ಮಂದಿ ಆರೋಪಿಗಳನ್ನು ನಿರ್ದೋಷಿಗಳು ಎಂದು ಪೊಲೀಸರು ವರದಿ ನೀಡಿದ್ದಾರೆ.

ಥಳಿತಕ್ಕೊಳಗಾಗಿದ್ದ ವ್ಯಕ್ತಿ ಸಾಯುವ ಮುನ್ನ ಪೊಲೀಸರಿಗೆ ನೀಡಿದ್ದ ಹೇಳಿಕೆಯಲ್ಲಿ ಹುಕುಮ್ ಚಂದ್, ನವೀನ್ ಶರ್ಮಾ, ಜಗ್ಮಲ್ ಯಾದವ್, ಓಂಪ್ರಕಾಶ್, ಸುಧೀರ್ ಹಾಗೂ ರಾಹುಲ್ ಸೈನಿ ಎಂಬುವವರನ್ನು ಹೆಸರಿಸಿದ್ದರು. ಆದರೆ, ಇವರು ಕೃತ್ಯ ಎಸಗಿರುವುದಕ್ಕೆ ಸಾಕ್ಷ್ಯಗಳಿಲ್ಲ ಎಂದು ವರದಿ ನೀಡಿರುವ ರಾಜಸ್ಥಾನ ಪೊಲೀಸರು, ಅವರ ವಿರುದ್ಧದ ಎಫ್‌ಐಆರ್‌ಗಳನ್ನು ರದ್ದು ಮಾಡಿದ್ದಾರೆ.

‘ಖಾನ್ ಅವರನ್ನು ಥಳಿಸಿದ ಗುಂಪಿನಲ್ಲಿ ಇವರೆಲ್ಲ ಇದ್ದರು ಎಂಬುದಕ್ಕೆ ಸಾಕ್ಷ್ಯಗಳಿಲ್ಲ.

ಘಟನೆ ನಡೆದ ವೇಳೆ ಇವರು ಬೇರೆ ಕಡೆ ಇದ್ದುದು ಅವರ ಮೊಬೈಲ್‌ಗಳ ಜಿಪಿಎಸ್ ಮಾಹಿತಿಯಿಂದ ತಿಳಿದುಬಂದಿದೆ. ಅಲ್ಲದೆ ಘಟನೆಗೆ ಸಂಬಂಧಿಸಿದ ಫೋಟೊ ಹಾಗೂ ದೃಶ್ಯಗಳಲ್ಲೂ ಈ ವ್ಯಕ್ತಿಗಳು ಕಾಣಿಸುತ್ತಿಲ್ಲ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ, ಇವರ ಹೆಸರಿನಲ್ಲಿ ಘೋಷಿಸಿದ್ದ ತಲಾ ₹ 5 ಸಾವಿರದ ಬಹುಮಾನವನ್ನೂ ಹಿಂದಕ್ಕೆ ಪಡೆಯಲಾಗಿದೆ.

ಜಾನುವಾರು ಮಾರುಕಟ್ಟೆಯಲ್ಲಿ ಖರೀದಿಸಿದ್ದ ಹಸುವನ್ನು ತಮ್ಮ ಗ್ರಾಮಕ್ಕೆ ಸಾಗಿಸುತ್ತಿದ್ದ 55 ವರ್ಷದ ಪೆಹ್ಲು ಖಾನ್ ಅವರ ಮೇಲೆ ಗುಂಪೊಂದು ಕಳೆದ ಏಪ್ರಿಲ್ 1ರಂದು ಹಲ್ಲೆ ನಡೆಸಿತ್ತು. ತೀವ್ರವಾಗಿ ಗಾಯಗೊಂಡಿದ್ದ ಖಾನ್ ಎರಡು ದಿನಗಳ ನಂತರ ಆಸ್ಪತ್ರೆಯಲ್ಲಿ ಮೃತರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT