ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಂಗಳಿಂದ ನಿಂತಲ್ಲೇ ನಿಂತ ಆಂಬುಲೆನ್ಸ್‌

Last Updated 4 ಅಕ್ಟೋಬರ್ 2017, 8:33 IST
ಅಕ್ಷರ ಗಾತ್ರ

ರಾಮನಗರ: ವಾಹನದ ಕ್ಷಮತೆ ಪ್ರಮಾಣಪತ್ರ (ಎಫ್‌ಸಿ) ನೀಡದ ಕಾರಣಕ್ಕೆ ಕಳೆದೊಂದು ತಿಂಗಳಿನಿಂದ ನಗರದ 108 ಆಂಬುಲೆನ್ಸ್‌ವೊಂದರ ಸೇವೆ ಸ್ಥಗಿತಗೊಂಡಿದ್ದು, ರೋಗಿಗಳು ಪರದಾಡುವಂತೆ ಆಗಿದೆ.

ಜಿಲ್ಲಾ ಆಸ್ಪತ್ರೆಯ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಈ ವಾಹನದ (ಕೆಎ–40, ಜಿ–234) ಎಫ್‌ಸಿ ಅವಧಿ ಕಳೆದ ತಿಂಗಳು ಮುಗಿದಿತ್ತು. ಸದ್ಯ ವಾಹನವು ಉತ್ತಮ ಸ್ಥಿತಿಯಲ್ಲಿ ಓಡುತ್ತಿರುವ ಕಾರಣ ಅದಕ್ಕೆ ಮತ್ತೆ ಕ್ಷಮತೆ ಪ್ರಮಾಣಪತ್ರ ಪಡೆದು ಮುಂದುವರಿಸಲು ನಿರ್ಧರಿಸಲಾಗಿತ್ತು. ಆದರೆ ಈ ಪ್ರಕ್ರಿಯೆಯು ನನೆಗುದಿಗೆ ಬಿದ್ದಿರುವುದರಿಂದ ಆಂಬುಲೆನ್ಸ್ ಅನ್ನು ಸದ್ಯ ಹಾಗೆಯೇ ನಿಲ್ಲಿಸಲಾಗಿದೆ.

ರಾಮನಗರ ಗ್ರಾಮೀಣ ಠಾಣೆಯ ಹಿಂಭಾಗ ಖಾಲಿ ಜಾಗದಲ್ಲಿ ಆಂಬುಲೆನ್ಸ್ ಹಾಗೆಯೇ ನಿಂತಿದೆ. ವಾಹನವನ್ನು ಒಂದು ತಿಂಗಳಿನಿಂದ ಮುಟ್ಟದ ಕಾರಣ ದೂಳು ಹಿಡಿಯುತ್ತಿದೆ. ವಾಹನದ ನಿರ್ವಹಣೆ ಮತ್ತು ತುರ್ತು ಸೇವೆಗಾಗಿ ಸರ್ಕಾರವು ಏಜೆನ್ಸಿ ಮೂಲಕ ತಲಾ ಇಬ್ಬರು ವಾಹನ ಚಾಲಕರು, ನರ್ಸ್‌ಗಳನ್ನು ನೇಮಿಸಿಕೊಂಡಿದ್ದು, ಈಗ ಅವರಿಗೆ ಕೆಲಸವಿಲ್ಲದಂತೆ ಆಗಿದೆ.

ಜಿಲ್ಲೆಯಲ್ಲಿ ಒಟ್ಟು 12 ಆಂಬುಲೆನ್ಸ್‌ಗಳು ಕಾರ್ಯ ನಿರ್ವಹಿಸುತ್ತಿವೆ. ರಾಮನಗರ ತಾಲ್ಲೂಕಿಗೆ ಮೂರು ವಾಹನಗಳನ್ನು ನೀಡಲಾಗಿದೆ. ಈ ಮೂರರಲ್ಲಿ ಇದೀಗ ಒಂದು ವಾಹನ ಕೆಟ್ಟಿದ್ದು, ಉಳಿದ ಎರಡರಲ್ಲಿ ಒಂದು ಕೈಕೊಟ್ಟರೂ ರೋಗಿಗಳು ಪರದಾಡುವುದು ಸಾಮಾನ್ಯವಾಗಿದೆ.

‘ತುರ್ತು ಸಂದರ್ಭಗಳಿಗೆಂದು ಸರ್ಕಾರ ಆಂಬುಲೆನ್ಸ್‌ಗಳ ಸೇವೆಯನ್ನು ಒದಗಿಸುತ್ತಿದೆ. ಆದರೆ ವಾಹನಗಳ ನಿರ್ವಹಣೆ ಸಮರ್ಪಕವಾಗಿ ಇಲ್ಲ. ಕೆಲವೊಮ್ಮೆ ಅಲ್ಲಲ್ಲಿ ಕೆಟ್ಟು ನಿಲ್ಲುತ್ತವೆ. ಇದೀಗ ಒಂದು ತಿಂಗಳಾದರೂ ವಾಹನವನ್ನು ಒಂದೇ ಕಡೆ ನಿಲ್ಲಿಸಲಾಗಿದೆ.

ಇದರಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ’ ಎಂದು ಸ್ಥಳೀಯ ನಿವಾಸಿ ರವಿಶಂಕರ್ ಆರೋಪಿಸಿದರು. ಆದಷ್ಟು ಶೀಘ್ರ ವಾಹನದ ಎಫ್‌ಸಿ ನವೀಕರಣ ಮಾಡಿಸಿ ಸಾರ್ವಜನಿಕರ ಸೇವೆಗೆ ಒದಗಿಸಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT