ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಿರ ವರ್ಷಗಳ ಹಿಂದೆಯೇ ವೈಜ್ಞಾನಿಕ ವಾಸ್ತುಶಿಲ್ಪ

Last Updated 10 ಅಕ್ಟೋಬರ್ 2017, 9:07 IST
ಅಕ್ಷರ ಗಾತ್ರ

ಮೈಸೂರು: ಭಾರತದಲ್ಲಿ 1 ಸಾವಿರ ವರ್ಷಗಳ ಹಿಂದೆಯೇ ವೈಜ್ಞಾನಿಕ ವಾಸ್ತುಶಿಲ್ಪ ಅಭಿವೃದ್ಧಿಗೊಂಡಿತ್ತು ಎಂದು ಸಂಶೋಧಕ ಡಾ.ಅ.ಸುಂದರ ಹೇಳಿದರು. ಮೈಸೂರು ವಿಶ್ವವಿದ್ಯಾನಿಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವಶಾಸ್ತ್ರ ವಿಭಾಗವು ಸೋಮವಾರ ಹಮ್ಮಿಕೊಂಡಿದ್ದ ‘ದೇಗುಲ ವಾಸ್ತುಶಿಲ್ಪ ಹಾಗೂ ಮೂರ್ತಿ ವಿನ್ಯಾಸ’ ಕುರಿತ 3 ದಿನಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ವಾಸ್ತುಶಿಲ್ಪವನ್ನು ಮಾತ್ರ ವೈಜ್ಞಾನಿಕ ಎಂದು ಹೇಳಲು ಸಾಧ್ಯವಿಲ್ಲ. ಭಾರತದಲ್ಲಿ 1 ಸಾವಿರ ವರ್ಷಗಳ ಹಿಂದೆಯೇ ವಾಸ್ತುಶಿಲ್ಪ ಉತೃಷ್ಠತೆ ಸಾಧಿಸಿತ್ತು. ಅಂದಿನ ದೇವಸ್ಥಾನಗಳ ರಚನೆಯನ್ನು ಗಮನಿಸಿದರೆ ವೈಜ್ಞಾನಿಕ ಸಲಕರಣೆಗಳು, ಗಣಿತ, ವಿಜ್ಞಾನವನ್ನು ಬಳಸಿಕೊಂಡು ಅತ್ಯಂತ ನಿಖರವಾದ ಕಟ್ಟಡಗಳ ನಿರ್ಮಾಣವಾಗಿರುವುದನ್ನು ಇಂದಿಗೂ ಕಾಣಬಹುದು ಎಂದು ಅವರು ತಿಳಿಸಿದರು.

ಇಂದಿಗೂ ಅನೇಕ ದೇವಸ್ಥಾನಗಳು ಸಾವಿರಾರು ವರ್ಷಗಳ ಪ್ರಾಕೃತಿಕ ವಿಕೋಪಗಳನ್ನು ತಡೆದುಕೊಂಡು ನಿಂತಿವೆ. ಇದಕ್ಕೆ ಮುಖ್ಯ ಕಾರಣ, ಆ ಕಟ್ಟಡಗಳ ನಿರ್ಮಾಣಕ್ಕೆ ಆಯ್ಕೆಯಾಗುತ್ತಿದ್ದ ಜಾಗ ಹಾಗೂ ಬಳಕೆಯಾಗುತ್ತಿದ್ದ ಕಚ್ಚಾವಸ್ತುಗಳು. ಅಲ್ಲದೇ, ಅಂದಿನ ಕಾಲದ ಭೌತವಿಜ್ಞಾನ ನಿಯಮಾವಳಿಗಳ ಅಳವಡಿಕೆ. ಅನೇಕ ತೀವ್ರ ಪ್ರಮಾಣದ ಭೂಕಂಪಗಳನ್ನು ತಡೆದುಕೊಂಡು ಈ ಕಟ್ಟಡಗಳು ಇಂದಿಗೂ ಉಳಿದುಕೊಂಡಿವೆ ಎಂದು ವರ್ಣಿಸಿದರು.

ಛಾಯಾಗ್ರಹಣ ತಂತ್ರಜ್ಞಾನವೇ ಇಲ್ಲದ ಅಂದಿನ ಕಾಲದಲ್ಲಿ ಏಕರೂಪದಲ್ಲಿ ವ್ಯಕ್ತಿಗಳನ್ನು ಚಿತ್ರಿಸಿರುವುದು ಹಾಗೂ ಮೂರ್ತಿಗಳನ್ನು ಕೆತ್ತಿರುವುದು ಅಚ್ಚರಿ ಮೂಡಿಸುತ್ತದೆ. ಉದಾಹರಣೆಗೆ ಬುದ್ಧನ ಮೂರ್ತಿ. ಬುದ್ಧನ ಅನೇಕ ಚಿತ್ರಗಳು, ಕೆತ್ತನೆಗಳು ವಿಶ್ವದ ಅನೇಕ ಭಾಗಗಳಲ್ಲಿ ಕಾಣಬಹುದು. ಇವೆಲ್ಲವೂ ಒಂದೇ ರೂಪದಲ್ಲೇ ಇವೆ. ಅಂದಿನ ಕಾಲದ ಸಂವಹನ ಮಾಧ್ಯಮಗಳನ್ನು ಬಳಸಿಕೊಂಡು ಮಾಹಿತಿ ರವಾನೆ ಮಾಡುತ್ತಿದ್ದ ವಿಧಾನಗಳು ಹೆಚ್ಚು ನಿಖರವಾಗಿರುತ್ತಿದ್ದವು; ದಾಖಲೆ ವಿಧಾನಗಳೂ ಉತ್ತಮವಾಗಿ ಇರುತ್ತಿದ್ದವು ಎಂದು ಅವರು ವಿಶ್ಲೇಷಿಸಿದರು.

ಭಾರತದಲ್ಲಿ ಕಲ್ಲನ್ನು ಬಳಸಿಕೊಂಡು ದೇವಸ್ಥಾನಗಳನ್ನು ಆರಂಭದ ದಿನಗಳಲ್ಲಿ ನಿರ್ಮಿಸುತ್ತಿರಲಿಲ್ಲ. ಆದರೆ, ಜೈನ ದೇಗುಲಗಳನ್ನು ಅನಾದಿ ಕಾಲದಿಂದಲೂ ಕಲ್ಲಿನಲ್ಲೇ ನಿರ್ಮಿಸಲಾಗುತ್ತಿತ್ತು. ಹಿಂದೂ ದೇವಾಲಯಗಳನ್ನು ನಂತರದ ದಿನಗಳಲ್ಲಿ ಕಲ್ಲಿನಲ್ಲೇ ನಿರ್ಮಿಸಲಾಯಿತು. ಕಲ್ಲಿನಿಂದ ನಿರ್ಮಿಸಿರುವ ಕಟ್ಟಡಗಳು ಉಳಿದುಕೊಂಡಿವೆ. ಮಣ್ಣಿನ ಇಟ್ಟಿಗೆಗಳ ದೇಗುಲಗಳು ಕಡಿಮೆ ಸಂಖ್ಯೆಯಲ್ಲಿವೆ ಎಂದರು.

ವಾಸ್ತು ವೇದಿಕ್ ಸಂಶೋಧನಾ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ಕೆ.ದಕ್ಷಿಣಾಮೂರ್ತಿ ಸ್ಥಪಾತಿ ಮುಖ್ಯ ಅತಿಥಿಯಾಗಿದ್ದರು. ಎಸ್‌ಡಿಎಂ ಧರ್ಮೋತ್ಥಾನ ಟ್ರಸ್ಟ್‌ ನಿರ್ದೇಶಕ ಎ.ಎಚ್‌.ಹರಿರಾಮ ಶೆಟ್ಟಿ, ಮಹಾರಾಜ ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ.ನಾಗರಾಜಮೂರ್ತಿ, ಹೈದರಾಬಾದಿನ ಕೇಂದ್ರೀಯ ವಿ.ವಿ ಇತಿಹಾಸ ವಿಭಾಗದ ನಿವೃತ್ತ ಪ್ರಾಧ್ಯಾಪಕ ಎಸ್‌.ನಾಗರಾಜು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT