ಬೀದರ್: ‘ಬಸವ ಧರ್ಮ ಪೀಠ ಮತ್ತು ಕಲ್ಯಾಣ ಪರ್ವ ಉತ್ಸವ ಸಮಿತಿಯ ಆಶ್ರಯದಲ್ಲಿ16ನೇ ಕಲ್ಯಾಣ ಪರ್ವ ಕಾರ್ಯಕ್ರಮ ಅಕ್ಟೋಬರ್ 14,15 ಹಾಗೂ 16ರಂದು ಬಸವಕಲ್ಯಾಣದ ಬಸವ ಮಹಾಮನೆಯ ಆವರಣದಲ್ಲಿ ನಡೆಯಲಿದ್ದು, ಸಕಲ ಸಿದ್ಧತೆ ಮಾಡಲಾಗಿದೆ’ ಎಂದು ಸಮಿತಿಯ ಪ್ರಧಾನ ಸಂಚಾಲಕ ಚನ್ನಬಸವಾನಂದ ಸ್ವಾಮೀಜಿ ಹೇಳಿದರು.
‘ಮಾತೆ ಮಹಾದೇವಿ ಅವರ ನೇತೃತ್ವದಲ್ಲಿ ಮೂರು ದಿನಗಳ ಕಾಲ ವಿಶೇಷ ಉಪನ್ಯಾಸ, ವಿಚಾರ ಸಂಕಿರಣ, ಧರ್ಮ ಚಿಂತನ ಗೋಷ್ಠಿಗಳು ನಡೆಯಲಿವೆ’ ಎಂದು ಶುಕ್ರವಾರ ಇಲ್ಲಿ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.
ಅ.14ರಂದು ಬೆಳಿಗ್ಗೆ 10.30ಕ್ಕೆ ಸಂಸದ ಭಗವಂತ ಖೂಬಾಷಟ್ಸ್ಥಲ ಧ್ವಜಾರೋಹಣ ನೆರವೇರಿಸುವರು. ಜಹೀರಾಬಾದ್ ಸಂಸದ ಬಿ.ಬಿ.ಪಾಟೀಲ ಕಾರ್ಯಕ್ರಮ ಉದ್ಘಾಟಿಸುವರು. ಕಲಬುರ್ಗಿಯ ರೇವಣಪ್ಪ ಹೆಗ್ಗಣೆ ಅಧ್ಯಕ್ಷತೆ ವಹಿಸುವರು.
ಕಲ್ಯಾಣ ಪರ್ವ ಉತ್ಸವ ಸ್ವಾಗತ ಸಮಿತಿಯ ಅಧ್ಯಕ್ಷ ಮಲ್ಲಿಕಾರ್ಜುನ ಖೂಬಾ, ಶಾಸಕರಾದ ರಹೀಂ ಖಾನ್, ವಿಜಯಸಿಂಗ್, ರಘುನಾಥರಾವ್ ಮಲ್ಕಾಪುರೆ, ಮುಖಂಡರಾದ ಸೂರ್ಯಕಾಂತ ನಾಗಮಾರಪಳ್ಳಿ, ಡಿ.ಕೆ ಸಿದ್ರಾಮ, ಪ್ರಕಾಶ ಖಂಡ್ರೆ, ತೆಲಂಗಾಣದ ಅಶೋಕ ಮುಸ್ತಾಪುರೆ, ನಿವೃತ್ತ ಲೋಕಾಯುಕ್ತ ಎಂ. ಶಿವರತ್ನ, ಧನರಾಜ ಜೀರಗೆ, ವಿಜಯಕುಮಾರ ಪಟ್ನೆ, ಬೀದರ್ ಜಿಲ್ಲಾ ರಾಷ್ಟ್ರೀಯ ಬಸವ ದಳದ ಅಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಮಧ್ಯಾಹ್ನ 3 ಗಂಟೆಗೆ ಲಿಂಗಾಯತ ಯುವ ಸಮಾವೇಶದಲ್ಲಿ ‘ಸ್ವತಂತ್ರ ಧರ್ಮ ಮಾನ್ಯತೆಯ ಹೋರಾಟದಲ್ಲಿ ಯುವಜನತೆಯ ಪಾತ್ರ’ ವಿಷಯದ ಚರ್ಚೆ ನಡೆಯಲಿದೆ. ಕಾಂಗ್ರೆಸ್ ಮುಖಂಡ ಆನಂದ ದೇವಪ್ಪ ಉದ್ಘಾಟಿಸುವರು.
ಕರ್ನಾಟಕ ಲಿಂಗಾಯತ ಧರ್ಮ ಮಹಾಸಭೆ ಅಧ್ಯಕ್ಷ ಚಂದ್ರಮೌಳಿ ಅಧ್ಯಕ್ಷತೆ ವಹಿಸುವರು. ಚನ್ನಬಸವಾನಂದ ಸ್ವಾಮೀಜಿ, ಬಸವಪ್ರಭು ಸ್ವಾಮೀಜಿ, ಶಂಕರಪ್ಪ ಪಾಟೀಲ, ರಾ.ಬ.ದ. ಅಧ್ಯಕ್ಷ ಬಸವರಾಜ ಕೊಂಡಗೊಳಿ, ಮುಖಂಡರಾದ ಕೆ. ವೀರೇಶ, ಕೆ. ಎಸ್. ಕೋರಿಶೆಟ್ಟರ್, ಈಶ್ವರ ಲಿಂಗಾಯತ, ದಿಲೀಪ ಭತಮುರ್ಗೆ ಭಾಗವಹಿಸುವರು.
ಸಂಜೆ 6.30ಕ್ಕೆ ಶರಣೆಯರ ಸಂಗಮ ಕಾರ್ಯಕ್ರಮದಲ್ಲಿ ‘ಧರ್ಮ ಸಂಸ್ಕಾರ ನೀಡುವಲ್ಲಿ ಮಹಿಳೆಯ ಪಾತ್ರ’ ಕುರಿತು ಗೋಷ್ಠಿ ನಡೆಯಲಿದೆ. ಗಂಗಾ ಮಾತಾಜಿ ಸಾನ್ನಿಧ್ಯ ವಹಿಸುವರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಯಶೋಧಾ ರಾಠೋಡ್ ಧ್ವಜಾರೋಹಣ ನೆರವೇರಿಸುವರು. ಜಿಲ್ಲಾ ಪಂಚಾಯಿತಿ ಸದಸ್ಯೆ ಶಕುಂತಲಾ ಬೆಲ್ದಾಳೆ ಉದ್ಘಾಟಿಸುವರು.
ಗುರಮ್ಮ ಸಿದ್ದಾರೆಡ್ಡಿ ಅಧ್ಯಕ್ಷತೆ ವಹಿಸುವರು. ಹೈದರಾಬಾದ್ನ ಪ್ರಕೃತಿ ಮತ್ತು ಸಂಗೀತ ಚಿಕಿತ್ಸಕ ಡಾ. ವಿನಯಾ, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಮಾಯಾದೇವಿ, ಶಕುಂತಲಾ ವಾಲಿ, ಡಾ.ಅನ್ನಪೂರ್ಣ ಸವದತ್ತಿ ಪಾಲ್ಗೊಳ್ಳುವರು. ಅ. 15ರಂದು ಬೆಳಿಗ್ಗೆ 10.30ಕ್ಕೆ ಧರ್ಮ ಚಿಂತನ ಗೋಷ್ಠಿ, ಮಧ್ಯಾಹ್ನ 3 ಗಂಟೆಗೆ ಮರಾಠಿ ಗೋಷ್ಠಿ, ಸಂಜೆ 6.30ಕ್ಕೆ ಅಲ್ಲಮಪ್ರಭು ಶೂನ್ಯ ಪೀಠದ ಹದಿನೈದನೆಯ ವಾರ್ಷಿಕೋತ್ಸವ ನಡೆಯಲಿದೆ.
16ರಂದು ಬೆಳಿಗ್ಗೆ 9 ಗಂಟೆಗೆ ಕೋಟೆಯಿಂದ ಹಳೆಯ ತಹಶೀಲ್ದಾರ್ ಕಚೇರಿ ಆವರಣದ ವರೆಗೆ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ಲಿಂಗಾಯತ ಧರ್ಮ ರ್ಯಾಲಿ ನಡೆಯಲಿದೆ. ಬೆಳಿಗ್ಗೆ 11 ಗಂಟೆಗೆ ಲಿಂಗಾಯತ ಧರ್ಮ ಸಮಾವೇಶ ಆಯೋಜಿಸಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಕಲ್ಯಾಣ ಪರ್ವಉತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಆನಂದ ದೇವಪ್ಪ, ಲಿಂಗಾಯತ ಧರ್ಮ ಸಮನ್ವಯ ಸಮಿತಿಯ ರಾಜ್ಯ ಸಂಚಾಲಕ ಶ್ರೀಕಾಂತ ಸ್ವಾಮಿ, ಲಿಂಗಾಯತ ಧರ್ಮ ಮಹಾಸಭೆಯ ರಾಜ್ಯ ಉಪಾಧ್ಯಕ್ಷ ಶಿವರಾಜ ಪಾಟೀಲ ಅತಿವಾಳ, ಬಾಬು ವಾಲಿ, ಲಿಂಗಾಯತ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಕುಶಾಲರಾವ್ ಪಾಟೀಲ ಖಾಜಾಪುರ, ಸುರೇಶಕುಮಾರ ಸ್ವಾಮಿ, ಮಹಾರುದ್ರ ಡಾಕುಳಗಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.