ಬೆಂಗಳೂರು: ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಬನಶಂಕರಿ ಎರಡನೇ ಹಂತದಲ್ಲಿರುವ ಸಂಸದ ಪಿ.ಸಿ. ಮೋಹನ್ ಮನೆಗೆ ಶುಕ್ರವಾರ ಬೆಳಿಗ್ಗೆ ಉಪಾಹಾರಕ್ಕೆ ಹೋದಾಗ ಚಪ್ಪಲಿ ಕಳೆದುಕೊಂಡರು. ಸುಮಾರು 20 ನಿಮಿಷ ಹುಡುಕಾಡಿದ ಬಳಿಕ ಅವರು ಬೇರೆ ಚಪ್ಪಲಿ ಹಾಕಿಕೊಂಡು ಹೋದರು.
ಉಪಾಹಾರ ಮುಗಿಸಿ ಮೊದಲ ಮಹಡಿಯಿಂದ ಇಳಿಯುವಷ್ಟರಲ್ಲಿ ಚಪ್ಪಲಿ ಕಾಣೆಯಾಗಿದ್ದವು. ಮತ್ತೆ ಮೊದಲ ಮಹಡಿಗೆ ತೆರಳಿದ ವೆಂಕಯ್ಯನಾಯ್ಡು ಚಪ್ಪಲಿಗಾಗಿ ಹುಡುಕಾಡಿದರು.
ಪಿ.ಸಿ. ಮೋಹನ್ ಮನೆಯವರು, ಕಾರ್ಯಕರ್ತರು, ಪೊಲೀಸರು ಸುಮಾರು 20 ನಿಮಿಷ ಹುಡುಕಾಡಿದರೂ ಚಪ್ಪಲಿ ಸಿಗಲಿಲ್ಲ. ನಾಯ್ಡು ಅವರು ತಮ್ಮ ಕಾರಿನಲ್ಲಿದ್ದ ಮತ್ತೊಂದು ಜೊತೆ ಚಪ್ಪಲಿ ಹಾಕಿಕೊಂಡು ಅಲ್ಲಿಂದ ತೆರಳಿದರು.
‘ಚಪ್ಪಲಿ ಕಳ್ಳತನವಾಗಿಲ್ಲ. ಒಂದೇ ರೀತಿ ಇದ್ದ ಕಾರಣ ಯಾರೋ ಹಾಕಿಕೊಂಡು ಹೋಗಿರಬಹುದು. ಅದೇ ಮಾದರಿ ಚಪ್ಪಲಿ ಬಿಟ್ಟು ಹೋಗಿದ್ದಾರೆ’ ಎಂದು ಪಿ.ಸಿ. ಮೋಹನ್ ಸ್ಪಷ್ಟಪಡಿಸಿದರು.