ಕಡೂರು: ಅಯ್ಯನಕೆರೆ ನೀರನ್ನು ಬಿಡುವ ವಿಚಾರವಾಗಿ ಶುಕ್ರವಾರ ಉದ್ಬವವಾಗಿದ್ದ ಸಮಸ್ಯೆ ಶನಿವಾರ ಸೌರ್ಹಾದಯುತವಾಗಿ ಅಂತ್ಯ ಕಂಡಿತು.
ಶನಿವಾರ ಸಖರಾಯಪಟ್ಟಣದ ಪೊಲೀಸ್ ಠಾಣೆಯಲ್ಲಿ ನಡೆದ ಸಭೆಯಲ್ಲಿ ಸಖರಾಯಪಟ್ಟಣ ಮತ್ತು ಬ್ರಹ್ಮ ಸಮುದ್ರ ಕೆರೆ ಬಳಕೆದಾರರು ಮತ್ತು ಬಿಸಲೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಖಂಡರು ಭಾಗವಹಿಸಿದ್ದರು.
ಅಧ್ಯಕ್ಷತೆ ವಹಿಸಿದ್ದ ತರೀಕೆರೆ ಉಪವಿಭಾಗಾಧಿಕಾರಿ ಬಿ.ಬಿ.ಸರೋಜ ಮಾತನಾಡಿ, ‘ಪ್ರಸ್ತುತ ಅಯ್ಯನಕೆರೆಯಲ್ಲಿ ಕೇವಲ ನಾಲ್ಕೂವರೆ ಅಡಿ ನೀರು ಇದ್ದು, ಅದರಲ್ಲಿ ಅರ್ಧ ಅಡಿ ಹೂಳು ಇದೆ. ಉಳಿದ ನಾಲ್ಕು ಅಡಿಗಳಲ್ಲಿ ಎರಡು ಅಡಿ ನೀರನ್ನು ಹೊರಬಿಟ್ಟು ಎರಡೂ ಕಡೆಯವರಿಗೆ ಸಮನಾಗಿ ನೀರು ಸಿಗಬೇಕು’ ಎಂದು ಅವರು ಹೇಳಿದರು.
ಸಖರಾಯಪಟ್ಟಣದಲ್ಲಿ ಪರಿಸ್ಥಿತಿ ಶಾಂತವಾಗಿದ್ದು, ನಿಷೇಧಾಜ್ಞೆ ತೆರವುಗೊಳಿಸುವುದಾಗಿ ಡಿವೈಎಸ್ಪಿ ತಿರುಮಲೇಶ್ ತಿಳಿಸಿದರು