ಪಟ್ನಾ: ರಾಜ್ಯದಲ್ಲಿ ಎನ್ಡಿಎ ಸಖ್ಯ ತೊರೆದು ಮಹಾಮೈತ್ರಿ ಸೇರುವುದಾಗಿ ಬಿಹಾರದ ಮಾಜಿ ಮುಖ್ಯಮಂತ್ರಿ, ಹಿಂದೂಸ್ತಾನಿ ಅವಾಮ್ ಮೋರ್ಚಾದ ಮುಖ್ಯಸ್ಥ ಜೀತನ್ ರಾಮ್ ಮಾಂಝಿ ಬುಧವಾರ ಹೇಳಿದ್ದಾರೆ.
ಆರ್ಜೆಡಿ ನಾಯಕರಾದ ತೇಜಸ್ವಿ ಯಾದವ್, ಬೋಲ್ ಯಾದವ್, ತೇಜ್ ಪ್ರತಾಪ್ ಯಾದವ್ ಅವರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡ ಮಾಂಝಿ ಅವರ ಸಮ್ಮುಖದಲ್ಲೇ ಈ ಘೋಷಣೆ ಮಾಡಿದ್ದಾರೆ.
‘ನಾವು ಎನ್ಡಿಎ ತೊರೆದು ಮಹಾಮೈತ್ರಿ ಸೇರಲು ನಿರ್ಧರಿಸಿದ್ದೇವೆ. ಈ ಕುರಿತು ನಡೆಯುವ ಸೇರ್ಪಡೆ ಕಾರ್ಯಕ್ರಮದಲ್ಲಿ ಎನ್ಡಿಎ ತೊರೆಯುವ ಕಾರಣಗಳನ್ನು ಸಾರ್ವಜನಿಕವಾಗಿಪ್ರಕಟಿಸಲಾಗುವುದು’ ಎಂದು ಮಾಂಝಿ ಹೇಳಿದ್ದಾರೆ.
‘ಸಾಮಾಜಿಕ ನ್ಯಾಯದ ಹರಿಕಾರ ಮಾಂಝಿ ಅವರ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ. ಅವರು ಪಕ್ಷ ತೊರೆಯುವುದರೊಂದಿಗೆ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟದಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದು ಬಹಿರಂಗವಾಗಿದೆ’ ಎಂದು ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಹೇಳಿದ್ದಾರೆ.
‘ಮಹಾಮೈತ್ರಿಗೆ ಮಾಂಝಿ ಅವರ ಸೇರ್ಪಡೆ ಆರಂಭವಷ್ಟೇ. ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪಕ್ಷದ ಅನೇಕ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ’ ಎಂದು ಆರ್ಜೆಡಿ ಪ್ರಧಾನ ಕಾರ್ಯದರ್ಶಿ ಭೋಲಾ ಯಾದವ್ ತಿಳಿಸಿದ್ದಾರೆ.