ನವದೆಹಲಿ: ಜೈಪುರದಲ್ಲಿ ನಡೆದ ರಾಷ್ಟ್ರೀಯ ಚಾಂಪಿಯನ್ಷಿಪ್ನಲ್ಲಿ ಮಹಿಳಾ ಸ್ಪರ್ಧಿಗಳ ವಿಡಿಯೋ ಮಾಡಿದ್ದ ಪ್ಯಾರಾ ಈಜುಪಟು ಪ್ರಶಾಂತ ಕರ್ಮಾಕರ್ ಅವರನ್ನು ಭಾರತ ಪ್ಯಾರಾಲಿಂಪಿಕ್ ಸಮಿತಿ (ಪಿಸಿಐ) ಮೂರು ವರ್ಷಗಳ ಅವಧಿಗೆ ಅಮಾನತು ಮಾಡಿದೆ.
‘ಪ್ರಶಾಂತ ಅವರ ವಿರುದ್ಧ ಅನುಚಿತ ವರ್ತನೆ, ತಪ್ಪುದಾರಿಗೆ ಎಳೆಯುವಿಕೆ ಹಾಗೂ ಹಲ್ಲೆಗೆ ಯತ್ನ ಪ್ರಕರಣಗಳಲ್ಲಿ ದೂರು ದಾಖಲಾಗಿದೆ’ ಎಂದು ಪಿಸಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಕರ್ಮಾಕರ್ 2010ರ ಪ್ಯಾರಾ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಕಂಚು ಗೆದ್ದುಕೊಂಡಿದ್ದರು.
‘ಮಹಿಳಾ ಈಜುಪಟುಗಳ ಸ್ಪರ್ಧೆ ನಡೆಯುತ್ತಿದ್ದ ವೇಳೆ ತಮ್ಮ ಸಹವರ್ತಿಯೊಬ್ಬರಿಗೆ ವಿಡಿಯೋ ಮಾಡುವಂತೆ ಕರ್ಮಾಕರ್ ಹೇಳಿದ್ದರು. ಪೋಷಕರು ವಿರೋಧ ವ್ಯಕ್ತಪಡಿಸಿದ ಬಳಿಕ ಪಿಸಿಐ ಸದಸ್ಯರಾದ ವಿ.ಕೆ.ದಬಾಸ್ ಅವರ ಬಳಿ ಸಹವರ್ತಿ ಸತ್ಯ ಒಪ್ಪಿಕೊಂಡಿದ್ದಾರೆ’ ಎಂದು ಪಿಸಿಐ ಹೇಳಿದೆ.
ಕರ್ಮಾಕರ್ ಸ್ವತಃ ವಿಡಿಯೊ ಮಾಡುತ್ತಿದ್ದ ವೇಳೆ ಕೂಡ ಸಿಕ್ಕಿಬಿದ್ದಿದ್ದಾರೆ ಎಂದು ಪಿಸಿಐ ಹೇಳಿದೆ. ಅವರನ್ನು ಕರೆಸಿ ವಿಚಾರಿಸಿದಾಗ ‘ಅದರಲ್ಲಿ ತಪ್ಪೇನು ಇದೆ‘ ಎಂದು ಏರುಧ್ವನಿಯಲ್ಲಿ ವಾದಿಸಿದ್ದರು ಎನ್ನಲಾಗಿದೆ.
‘ಸ್ಪರ್ಧಿಗಳ ಪೋಷಕರು ವಿರೋಧಿಸಿದ್ದಕ್ಕೆ ಸಾಕ್ಷಿ ಇದೆಯಾ? ಲಿಖಿತ ದೂರು ನೀಡಿದ್ದಾರಾ? ಎಂದು ಕರ್ಮಾಕರ್ ಕೇಳಿದ್ದರು. ತಕ್ಷಣವೇ ಪೋಷಕರಿಂದ ದೂರು ಪಡೆದುಕೊಳ್ಳಲಾಯಿತು’ ಎಂದು ಪಿಸಿಐ ಮಾಹಿತಿ ನೀಡಿದೆ.
‘ಪಿಸಿಐ ಸಮಿತಿ ಸದಸ್ಯರಾದ ವಿ.ಕೆ. ದಬಾಸ್ ಹಾಗೂ ಹರಿಯಾಣದ ಮಹಿಪಾಲ್ ಸಿಂಗ್ ಆರ್ಯ ಅವರ ಎದುರು ಕರ್ಮಾಕರ್ ವಾದ ಮಾಡಿದರು. ವಿಡಿಯೋ ಅಳಿಸಿ ಹಾಕಲು ವಿರೋಧ ವ್ಯಕ್ತಪಡಿಸಿದ್ದರು. ತಕ್ಷಣವೇ ಪೊಲೀಸರು ಅವರನ್ನು ವಶಕ್ಕೆ ಪಡೆದುಕೊಂಡಿದ್ದರು. ವಿಡಿಯೋ ಅಳಿಸಿಹಾಕಲು ಒಪ್ಪಿಕೊಂಡ ನಂತರ ಬಿಡುಗಡೆ ಮಾಡಿದ್ದರು’ ಎಂದು ಪಿಸಿಐ ವಿವರಿಸಿದೆ.
ಅರ್ಜೆಂಟೀನಾದಲ್ಲಿ 2003ರಲ್ಲಿ ನಡೆದ ವಿಶ್ವ ಈಜು ಚಾಂಪಿಯನ್ಷಿಪ್ನಲ್ಲಿ ಪದಕ ಗೆದ್ದ ಭಾರತದ ಮೊದಲ ಪ್ಯಾರಾ ಈಜುಪಟು ಎಂಬ ಖ್ಯಾತಿ ಕರ್ಮಾಕರ್ ಅವರದ್ದಾಗಿದೆ. 16 ವರ್ಷ ಸತತವಾಗಿ ರಾಷ್ಟ್ರೀಯ ಚಾಂಪಿಯನ್ ಆಗಿದ್ದಾರೆ.
2016ರ ರಿಯೊ ಪ್ಯಾರಾಲಿಪಿಂಕ್ಸ್ನಲ್ಲಿ ಭಾರತ ಈಜು ತಂಡದ ಕೋಚ್ ಕೂಡ ಆಗಿದ್ದರು.