ನಾಯಕನಹಟ್ಟಿ: ‘ಮ್ಯಾಸ ನಾಯಕ ಸಂಸ್ಕೃತಿ, ಕಟ್ಟೆಮನೆಗಳ ಬಗ್ಗೆ ತಿಳಿಯದ ಸಂಸದ ಶ್ರೀರಾಮುಲು, ನಾಯಕ ಸಮುದಾಯ ರಾಜ್ಯ ನಾಯಕನಾಗಲು ಸಾಧ್ಯವಿಲ್ಲ. ಅವರ ಕಟ್ಟೆಮನೆ ಯಾವುದೆಂದು ಮೊದಲು ತಿಳಿಸಲಿ. ಗಂಡಸಾದರೆ ಮ್ಯಾಸನಾಯಕರ ಮುಂದೆ ಅವರು ಚುನಾವಣೆ ಗೆದ್ದು ತೋರಿಸಲಿ’ ಎಂದು ಶಾಸಕ ಎಸ್.ತಿಪ್ಪೇಸ್ವಾಮಿ ಸವಾಲು ಹಾಕಿದರು.
ಹೋಬಳಿಯ ನೇರಲಗುಂಟೆ ಗ್ರಾಮದ ನಿವಾಸದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು. ‘ಶ್ರೀರಾಮುಲು ಇಡೀ ಕ್ಷೇತ್ರದ ನಿಷ್ಠಾವಂತ ಕಾರ್ಯಕರ್ತರಿಗೆ ಮೋಸ ಮಾಡಿದ್ದಾರೆ. ಕೊಟ್ಟ ಮಾತು ತಪ್ಪಿದ್ದಾರೆ. ಇದು ನಾಯಕ ಸಮುದಾಯಕ್ಕೆ ಶೋಭೆ ತರುವ ಕೆಲಸವಲ್ಲ’ ಎಂದು ವಾಗ್ದಾಳಿ ನಡೆಸಿದರು.
‘ಹಲವು ಸಮಸ್ಯೆಗಳ ನಡುವೆಯೂ ಕ್ಷೇತ್ರದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದೇವೆ. ಈಗ ಸುಲಭವಾಗಿ ಗೆಲ್ಲಬಹುದು ಎಂಬ ಕುತಂತ್ರದಿಂದ ಶ್ರೀರಾಮುಲು ಇಲ್ಲಿಗೆ ಬಂದಿದ್ದಾರೆ. ನನ್ನಿಂದ ಲಾಭ ಪಡೆದು ನನ್ನ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದ ಕೆಲ ಮುಖಂಡರು ಅವರ ಬೆಂಬಲಕ್ಕೆ ನಿಂತಿದ್ದಾರೆ. ಅಂಥವರು ಮಂಗಳಮುಖಿಯರಿಗೆ ಸಮಾನರು. ಅವರಿಂದ ಶ್ರೀರಾಮುಲುಗೆ ಎಷ್ಟು ಮತಗಳು ಲಭಿಸಲಿವೆ ಎಂದು ನಾನೂ ನೋಡುತ್ತೇನೆ. ಯಾವುದಾದರೂ ಪಕ್ಷದಿಂದ ಅಥವಾ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಶ್ರೀರಾಮುಲು ಅವರನ್ನು ಕ್ಷೇತ್ರದಿಂದ ಓಡಿಸುತ್ತೇನೆ. ಇದು ನನ್ನ ಕ್ಷೇತ್ರದ ಮ್ಯಾಸನಾಯಕರ ಮೇಲಾಣೆ’ ಎಂದು ಘೋಷಿಸಿದರು.