ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಇದು ಮೀರಾ ರಸ್ತೆ ಸಂಘರ್ಷದಲ್ಲಿ ಭಾಗಿಯಾದವರನ್ನು ಬಂಧಿಸುತ್ತಿರುವ ವಿಡಿಯೊವಲ್ಲ

Published 25 ಜನವರಿ 2024, 23:07 IST
Last Updated 25 ಜನವರಿ 2024, 23:07 IST
ಅಕ್ಷರ ಗಾತ್ರ

ಮನೆ ಮನೆಗೆ ತೆರಳಿ ಪೊಲೀಸರು ಯುವಕರನ್ನು ವಶಕ್ಕೆ ಪಡೆಯುತ್ತಿರುವ ದೃಶ್ಯಗಳಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆಯಾಗುತ್ತಿದೆ. ರಾಮಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪಣೆ ನೆರವೇರುವುದಕ್ಕೂ ಹಿಂದಿನ ದಿನ (ಜ.21) ಮುಂಬೈನ ಮೀರಾ ರಸ್ತೆಯಲ್ಲಿ ಕೋಮು ಸಂಘರ್ಷ ನಡೆದಿದೆ. ಈ ಸಂಘರ್ಷದಲ್ಲಿ ಭಾಗಿಯಾಗಿರುವ ಯುವಕರನ್ನು ಪೊಲೀಸರು ಬಂಧಿಸುತ್ತಿದ್ದಾರೆ ಎಂದು ಈ ವಿಡಿಯೊದೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳಲಾಗುತ್ತಿದೆ.

‘ಜನವರಿ 22ರಂದು ನಡೆದ ಪ್ರಭು ಶ್ರೀರಾಮನ ಶೋಭಾಯಾತ್ರೆಯು ಮೀರಾ ರಸ್ತೆಯಲ್ಲಿ ನಡೆಯಿತು. ಈ ವೇಳೆ, ಜಿಹಾದಿಗಳು ಕೇಸರಿ ಶಾಲನ್ನು ಎಳೆದಾಡಿದರು. ಮಹಿಳೆಯನ್ನು ಅವಮಾನಿಸಿದರು. ಯಾತ್ರೆಯೊಂದಿಗೆ ತೆರಳುತ್ತಿದ್ದ ಕಾರುಗಳನ್ನು ಕುಟ್ಟಿದರು. ಈ ಜಿಹಾದಿಗಳನ್ನು ಹುಡುಕಿ, ಅವರ ಮನೆಯಿಂದ ಹೊರಗೆಳೆದು ಪೊಲೀಸ್‌ ಠಾಣೆಗೆ ಕರೆದುಕೊಂಡು ಹೋಗಲಾಯಿತು’ ಎಂದು ಫೇಸ್‌ಬುಕ್‌ನಲ್ಲಿ ಕೆಲವರು ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ.

ಬಿಜೆಪಿ ಶಾಸಕ ಟಿ.ರಾಜ ಸಿಂಗ್‌ ಅವರನ್ನು 2022ರ ಆಗಸ್ಟ್‌ನಲ್ಲಿ ಪೊಲೀಸರು ಹೈದರಾಬಾದ್‌ನಲ್ಲಿ ಬಂಧಿಸಿದ್ದರು. ಅವರು ಪ್ರವಾದಿ ಮೊಹಮ್ಮದರ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದರು. ನಂತರ ಕೆಲವೇ ದಿನಗಳಲ್ಲಿ ಅವರನ್ನು ಬಿಡುಗಡೆ ಮಾಡಲಾಯಿತು. ಇದನ್ನು ವಿರೋಧಿಸಿ ಕೆಲವು ಯುವಕರು ಪ್ರತಿಭಟನೆ ನಡೆಸಿದ್ದರು. ಈ ವೇಳೆಯಲ್ಲಿ ಈ ಯುವಕರನ್ನು ಬಂಧಿಸಲಾಗಿತ್ತು. ಈ ಬಂಧನದ ವಿಡಿಯೊವನ್ನು ಮೀರಾ ರಸ್ತೆಯಲ್ಲಿ ನಡೆದ ಸಂಘರ್ಷದ ಹಿನ್ನೆಲೆಯಲ್ಲಿ ಬಳಸಿಕೊಳ್ಳಲಾಗುತ್ತಿದೆ. ಛತ್ರಪತಿ ಸಾಂಬಾಜಿನಗರದಲ್ಲಿ 2023ರ ಏಪ್ರಿಲ್‌ನಲ್ಲಿ ರಾಮ ನವಮಿಯ ಸಂದರ್ಭದಲ್ಲೂ ಸಂಘರ್ಷ ಏರ್ಪಟ್ಟಿತ್ತು. ಈ ಸಂದರ್ಭದಲ್ಲಿಯೂ ಇದೇ ವಿಡಿಯೊವನ್ನು ಬಳಸಿಕೊಂಡು ಕೋಮು ದ್ವೇಷ ಹರಡಲಾಗಿತ್ತು ಎಂದು ಬೂಮ್‌ಲೈವ್‌ ಫ್ಯಾಕ್ಟ್‌ಚೆಕ್‌ ಪ್ರಕಟಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT