ಮನೆ ಮನೆಗೆ ತೆರಳಿ ಪೊಲೀಸರು ಯುವಕರನ್ನು ವಶಕ್ಕೆ ಪಡೆಯುತ್ತಿರುವ ದೃಶ್ಯಗಳಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆಯಾಗುತ್ತಿದೆ. ರಾಮಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪಣೆ ನೆರವೇರುವುದಕ್ಕೂ ಹಿಂದಿನ ದಿನ (ಜ.21) ಮುಂಬೈನ ಮೀರಾ ರಸ್ತೆಯಲ್ಲಿ ಕೋಮು ಸಂಘರ್ಷ ನಡೆದಿದೆ. ಈ ಸಂಘರ್ಷದಲ್ಲಿ ಭಾಗಿಯಾಗಿರುವ ಯುವಕರನ್ನು ಪೊಲೀಸರು ಬಂಧಿಸುತ್ತಿದ್ದಾರೆ ಎಂದು ಈ ವಿಡಿಯೊದೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳಲಾಗುತ್ತಿದೆ.
‘ಜನವರಿ 22ರಂದು ನಡೆದ ಪ್ರಭು ಶ್ರೀರಾಮನ ಶೋಭಾಯಾತ್ರೆಯು ಮೀರಾ ರಸ್ತೆಯಲ್ಲಿ ನಡೆಯಿತು. ಈ ವೇಳೆ, ಜಿಹಾದಿಗಳು ಕೇಸರಿ ಶಾಲನ್ನು ಎಳೆದಾಡಿದರು. ಮಹಿಳೆಯನ್ನು ಅವಮಾನಿಸಿದರು. ಯಾತ್ರೆಯೊಂದಿಗೆ ತೆರಳುತ್ತಿದ್ದ ಕಾರುಗಳನ್ನು ಕುಟ್ಟಿದರು. ಈ ಜಿಹಾದಿಗಳನ್ನು ಹುಡುಕಿ, ಅವರ ಮನೆಯಿಂದ ಹೊರಗೆಳೆದು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಲಾಯಿತು’ ಎಂದು ಫೇಸ್ಬುಕ್ನಲ್ಲಿ ಕೆಲವರು ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ.