ನವದೆಹಲಿ: ಸುಮಾರು ₹429 ಕೋಟಿ ದುರುಪಯೋಗ ಹಾಗೂ ಹಣ ಅಕ್ರಮ ವರ್ಗಾವಣೆ ಆರೋಪದ ಮೇರೆಗೆ ಪುಣೆ ಮೂಲದ ಸಹಕಾರಿ ಬ್ಯಾಂಕ್ನ ಮಾಜಿ ಅಧ್ಯಕ್ಷ ಅಮರ್ ಸಾಧುರಾಂ ಮೂಲ್ಚಂದಾನಿ ಎಂಬುವರನ್ನು ಬಂಧಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯವು (ಇ.ಡಿ) ಬುಧವಾರ ತಿಳಿಸಿದೆ.
ಸೇವಾ ವಿಕಾಸ್ ಸಹಕಾರ ಬ್ಯಾಂಕ್ನ ಮಾಜಿ ಅಧ್ಯಕ್ಷರಾಗಿರುವ ಅಮರ್ ಸಾಧುರಾಂ ಅವರನ್ನು ಜುಲೈ 1ರಂದು ಹಣ ಅಕ್ರಮ ವರ್ಗಾವಣೆ ವಿಶೇಷ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ಬಂಧಿಸಲಾಗಿದೆ. ಅವರನ್ನು ಜುಲೈ 7ರವರೆಗೆ ವಶಕ್ಕೆ ಪಡೆಯಲಾಗಿದೆ ಎಂದೂ ಇ.ಡಿ ತನ್ನ ಹೇಳಿಕೆಯಲ್ಲಿ ಮಾಹಿತಿ ನೀಡಿದೆ.
‘ಸೇವಾ ವಿಕಾಸ್ ಸಹಕಾರ ಬ್ಯಾಂಕ್ನ 124 ಎನ್ಪಿಎ (ನಿರ್ವಹಣೆ ಮಾಡದ ಆಸ್ತಿಗಳು) ಸಾಲದ ಖಾತೆಗಳಲ್ಲಿ ₹429 ಕೋಟಿ ನಷ್ಟವುಂಟಾಗಿತ್ತು. ಇದರಿಂದ ಬ್ಯಾಂಕ್ ದಿವಾಳಿಯಾಗಿದ್ದು, ಸಾವಿರಾರು ಸಣ್ಣ ಉದ್ದಿಮೆದಾರರಿಗೆ ನಷ್ಟ ಉಂಟಾಗಿದೆ’ ಎಂದು ಇ.ಡಿ ತಿಳಿಸಿದೆ.
ಬ್ಯಾಂಕ್ಗೆ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ಈ ಹಿಂದೆ ನಾಲ್ವರನ್ನು ಬಂಧಿಸಿತ್ತು. ಬ್ಯಾಂಕ್ನಿಂದ ಸಾಲ ಪಡೆದು ಮರುಪಾವತಿ ಮಾಡದ ಸಾಗರ್ ಸೂರ್ಯವಂಶಿ ಎಂಬುವರು ಇ.ಡಿ ಜತೆಗೆ ಹಂಚಿಕೊಂಡ ಮಾಹಿತಿಯ ಮೇರೆಗೆ ಅಮರ್ ಸಾಧುರಾಂ ಅವರನ್ನು ಬಂಧಿಸಲಾಗಿದೆ.