ಚೆನ್ನೈ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿಗಳನ್ನು ನಾಯಕರಂತೆ ಆರಾಧಿಸುವ ನಡೆಗೆ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು,‘ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಏಳು ಆರೋಪಿಗಳನ್ನು ನಾಯಕರನ್ನಾಗಿ ಮಾಡಬೇಡಿ ಅವರು ನಾಯಕರಲ್ಲ. ಅಲ್ಲದೆ 1991ರ ದಾಳಿಯಲ್ಲಿ ರಾಜೀವ್ ಗಾಂಧಿ ಜತೆಯಲ್ಲಿ ಮೃತಪಟ್ಟ 15 ಮಂದಿ ಮುಗ್ದರ ಬಗ್ಗೆ ಏಕೆ ತಮಿಳು ಪರ ಸಂಘಟನೆಗಳು ಏನೂ ಹೇಳುತ್ತಿಲ್ಲ' ಎಂದು ಪ್ರಶ್ನಿಸಿದರು.
ಖಾಸಗಿ ನ್ಯೂಸ್ ಚಾನೆಲ್ಗೆ ನೀಡಿದ ತಮ್ಮ ಸಂದರ್ಶನದ ವಿಡಿಯೊ ತುಣುಕನ್ನು ಅವರು ಹಂಚಿಕೊಂಡಿದ್ದಾರೆ.
ಆಡಳಿತಾರೂಢ ಎಐಎಡಿಎಂಕೆ, ವಿರೋಧ ಪಕ್ಷವಾದ ಡಿಎಂಕೆ, ಇತರೆ ಪಕ್ಷಗಳು ಅಪರಾಧಿಗಳ ಬಿಡುಗಡೆಯನ್ನು ಬೆಂಬಲಿಸುತ್ತಿವೆ.
2018ರಲ್ಲಿ ಎಐಎಡಿಎಂಕೆ ಸರ್ಕಾರವು ಅಪರಾಧಿಗಳ ಬಿಡುಗಡೆಗೆ ಶಿಫಾರಸು ಮಾಡಿತ್ತು. ಆದರೆ ಇದಕ್ಕೆ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರಿಂದ ಇನ್ನೂ ಅನುಮೋದನೆ ಸಿಕ್ಕಿಲ್ಲ.
ರಾಜಕೀಯ ಪಕ್ಷಗಳು ಅಪರಾಧಿಗಳನ್ನು ಬಿಡುಗಡೆಗೊಳಿಸಲು ಒತ್ತಾಯಿಸುತ್ತಿವೆ. ಈ ನಡೆ ಸ್ವೀಕಾರಾರ್ಹವಲ್ಲ ಎಂದು ತಮಿಳುನಾಡು ಕಾಂಗ್ರೆಸ್ ಸಮಿತಿ ಹೇಳಿದೆ.