ಧನ್ಬಾದ್ (ಜಾರ್ಖಂಡ್): ಇದೇ 22ರಂದು ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯುತ್ತಿದ್ದು, ಇದಕ್ಕಾಗಿ 3 ದಶಕಗಳಿಂದ ಮೌನ ವ್ರತ ಕೈಗೊಂಡಿದ್ದ ಜಾರ್ಖಂಡ್ನ 85 ವರ್ಷದ ಮಹಿಳೆಯೊಬ್ಬರು ಅಂದು ತಮ್ಮ ವ್ರತವನ್ನು ಅಂತ್ಯಗೊಳಿಸಲಿದ್ದಾರೆ.
1992ರಲ್ಲಿ ಬಾಬರಿ ಮಸೀದಿ ಧ್ವಂಸಗೊಂಡ ದಿನವೇ ಸರಸ್ವತಿ ದೇವಿ ಎಂಬ ಮಹಿಳೆ ರಾಮಮಂದಿರ ಕಟ್ಟಿದ ಬಳಿಕವೇ ನಾನು ಮಾತನಾಡುವೆ. ಅಲ್ಲಿಯವರೆಗೂ ಮೌನ ವ್ರತ ಆಚರಿಸುವೆ ಎಂದು ಪ್ರತಿಜ್ಞೆ ಮಾಡಿದ್ದರು ಎಂದು ಅವರ ಕುಟುಂಬದವರು ಹೇಳಿದ್ದಾರೆ.
ಧನ್ಬಾದ್ ನಿವಾಸಿಯಾಗಿರುವ ಮಹಿಳೆ ದೇವಾಲಯದ ಉದ್ಘಾಟನೆಗೆ ಸಾಕ್ಷಿಯಾಗಲು ಮಂಗಳವಾರ ಸಂಜೆ ಅಯೋಧ್ಯೆ ತಲುಪಿದ್ದಾರೆ.
'ಮೌನಿ ಮಾತಾ' ಎಂದು ಹೆಸರುವಾಸಿಯಾಗಿರುವ ದೇವಿ, ಸನ್ನೆ ಮೂಲಕ ಕುಟುಂಬದ ಸದಸ್ಯರೊಂದಿಗೆ ಸಂವಹನ ನಡೆಸುತ್ತಿದ್ದು, ಕಠಿಣ ವಾಕ್ಯಗಳನ್ನು ಬರೆದು ತಿಳಿಸುತ್ತಾರೆ.
2020ರವರೆಗೆ ಅವರು ಪ್ರತಿದಿನ ಮಧ್ಯಾಹ್ನ ಒಂದು ಗಂಟೆ 'ಮೌನವ್ರತ'ದಿಂದ ವಿರಾಮ ತೆಗೆದುಕೊಂಡು ಮಾತನಾಡುತ್ತಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ದೇವಾಲಯಕ್ಕೆ ಅಡಿಪಾಯ ಹಾಕಿದ ದಿನದ ನಂತರ ಅವರು ಸಂಪೂರ್ಣವಾಗಿ ಮೌನಕ್ಕೆ ಶರಣಾಗಿದ್ದಾರೆ.
‘ಡಿಸೆಂಬರ್ 6, 1992ರಂದು ಬಾಬರಿ ಮಸೀದಿ ಧ್ವಂಸವಾದ ದಿನ, ನನ್ನ ತಾಯಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುವವರೆಗೆ ಮೌನ ವ್ರತ ಮಾಡುವುದಾಗಿ ಪ್ರತಿಜ್ಞೆ ಮಾಡಿದರು. ದೇವಾಲಯದ ಉದ್ಘಾಟನೆ ದಿನಾಂಕವನ್ನು ಘೋಷಿಸಿದಾಗಿನಿಂದ ಅವರು ಸಂತೋಷಬಾಗಿದ್ದಾರೆ’ಎಂದು ದೇವಿಯ ಕಿರಿಯ ಮಗ ಹರೇ ರಾಮ್ ಅಗರ್ವಾಲ್ ತಿಳಿಸಿದರು.