ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಜಯ್ ಸಿಂಗ್‌ಗೆ ಜಾಮೀನು; ಸತ್ಯಮೇವ ಜಯತೆ: ಎಎಪಿ

Published 2 ಏಪ್ರಿಲ್ 2024, 13:33 IST
Last Updated 2 ಏಪ್ರಿಲ್ 2024, 13:33 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಎಎಪಿಯ ರಾಜ್ಯಸಭಾ ಸದಸ್ಯ ಸಂಜಯ್‌ ಸಿಂಗ್‌ ಅವರಿಗೆ ಸುಪ್ರೀಂ ಕೋರ್ಟ್‌ ಮಂಗಳವಾರ ಜಾಮೀನು ಮಂಜೂರು ಮಾಡಿದೆ. ಸುಪ್ರೀಂ ಕೋರ್ಟ್‌ ತೀರ್ಪನ್ನು ಆಮ್‌ ಆದ್ಮಿ ಪಕ್ಷ (ಎಎಪಿ) ಸ್ವಾಗತಿಸಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಎಎಪಿ ನಾಯಕರು, 'ದೆಹಲಿ ಅಬಕಾರಿ ನೀತಿ ಹಗರಣವು ಬಲವಂತವಾಗಿ ಸಾಕ್ಷಿದಾರರು ನೀಡಿದ ಹೇಳಿಕೆಗಳನ್ನು ಆಧರಿಸಿವೆ' ಎಂಬುದು ಈಗ ಬಯಲಾಗಿದೆ ಎಂದು ಹೇಳಿದ್ದಾರೆ.

ಸಂಜಯ್‌ ಸಿಂಗ್‌ ಅವರನ್ನು ಇಂದು (ಮಂಗಳವಾರ) ಬೆಳಿಗ್ಗೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಾಳೆ (ಬುಧವಾರ) ಅವರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸುವ ಸಾಧ್ಯತೆ ಇದೆ ಎಂದು ಅಧಿಕೃತ ಮೂಲಗಳು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿವೆ.

ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಅಕ್ಟೋಬರ್‌ 4ರಂದು ಜಾರಿ ನಿರ್ದೇಶನಾಲಯವು (ಇ.ಡಿ) ಸಂಜಯ್‌ ಸಿಂಗ್‌ ಅವರನ್ನು ಬಂಧಿಸಿತ್ತು.

‘ಇಂದು ದೇಶದ ಪ್ರಜಾಪ್ರಭುತ್ವಕ್ಕೆ ಮಹತ್ತರ ದಿನವಾಗಿದ್ದು, ಸಂತೋಷ ಹಾಗೂ ಭರವಸೆಯ ಕ್ಷಣವಾಗಿದೆ’ ಎಂದು ದೆಹಲಿ ಸಚಿವ ಸೌರಭ್‌ ಭಾರದ್ವಾಜ್‌ ಹೇಳಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಸಚಿವೆ ಅತಿಶಿ, ‘ಎರಡು ವರ್ಷಗಳಿಂದ ಸುಳ್ಳು ಪ್ರಕರಣದಲ್ಲಿ ಎಎಪಿ ನಾಯಕರನ್ನು ಬಂಧಿಸಿ ಗುರಿಯಾಗಿಸಲಾಗಿದೆ. ಸಿಂಗ್‌ ಅವರಿಗೆ ಜಾಮೀನು ಸಿಕ್ಕಿರುವುದು ಸತ್ಯಕ್ಕೆ ದೊರೆತ ಜಯವಾಗಿದೆ. ನ್ಯಾಯಾಲಯದ ವಿಚಾರಣೆಯ ವೇಳೆ ಎರಡು ಪ್ರಮುಖ ವಿಷಯಗಳು ಜನರ ಮುಂದೆ ಬಹಿರಂಗಗೊಂಡಿವೆ. ಹಣದ ವಹಿವಾಟು ಎಲ್ಲಿ ನಡೆದಿದೆ ಎಂಬ ಸುಪ್ರೀಂ ಕೋರ್ಟಿನ ಪ್ರಶ್ನೆಗೆ ಇ.ಡಿ ಬಳಿ ಉತ್ತರವೇ ಇರಲಿಲ್ಲ ಮತ್ತು ಸಂಪೂರ್ಣ ಪ್ರಕರಣ ಒತ್ತಾಯ ಪೂರ್ವಕವಾಗಿ ಸಾಕ್ಷಿದಾರರು ನೀಡಿದ ಹೇಳಿಕೆಗಳನ್ನು ಆಧರಿಸಿದೆ ಎಂಬುದು ಸಾಬೀತಾಗಿದೆ’ ಎಂದು ಹೇಳಿದ್ದಾರೆ.

ಅಬಕಾರಿ ನೀತಿ ಹಗರಣ ಸಂಬಂಧ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಬಂಧನಕ್ಕೊಳಗಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ನ್ಯಾಯಾಂಗ ಬಂಧನವನ್ನು ಏಪ್ರಿಲ್‌ 15ರವರೆಗೆ ವಿಸ್ತರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT