ನವದೆಹಲಿ: ‘ದೇಶದ 766 ಜಿಲ್ಲಾಕೇಂದ್ರಗಳ ಪೈಕಿ 40ಕ್ಕೆ ಈವರೆಗೂ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಕಲ್ಪಿಸಲು ಸಾಧ್ಯವಾಗಿಲ್ಲ’ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಗುರುವಾರ ಲೋಕಸಭೆಗೆ ತಿಳಿಸಿದ್ದಾರೆ.
ಲೋಕಸಭೆಯಲ್ಲಿ ಲಿಖಿತ ಹೇಳಿಕೆ ನೀಡಿರುವ ಅವರು, ‘ತೆಲಂಗಾಣದಲ್ಲಿ ಗರಿಷ್ಠ 6 ಜಿಲ್ಲಾ ಕೇಂದ್ರಗಳು ಈವರೆಗೂ 10 ಕಿ.ಮೀ. ವ್ಯಾಪ್ತಿಯಲ್ಲಿ ಹೆದ್ದಾರಿ ಸಂಪರ್ಕವನ್ನು ಪಡೆದಿಲ್ಲ. ನಂತರದ ಸ್ಥಾನದಲ್ಲಿ ಮಧ್ಯಪ್ರದೇಶ–5 ಹಾಗೂ ರಾಜಸ್ಥಾನದ 4 ಜಿಲ್ಲಾ ಕೇಂದ್ರಗಳಿವೆ’ ಎಂದಿದ್ದಾರೆ.
‘ಕಳೆದ ಐದು ವರ್ಷಗಳಲ್ಲಿ (2018–19ರಿಂದ 2022–23) ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ವೇಗ ಪ್ರತಿ ದಿನಕ್ಕೆ 30 ಕಿ.ಮೀ. ಇದೆ. 2009–10 ಹಾಗೂ 2013–14ನೇ ಸಾಲಿನವರೆಗಿನ ಐದು ವರ್ಷಗಳಲ್ಲಿ ಈ ವೇಗ ಪ್ರತಿ ದಿನ 13 ಕಿ.ಮೀ. ಇತ್ತು’ ಎಂದು ತಮ್ಮ ಹೇಳಿಕೆಯಲ್ಲಿ ಗಡ್ಕರಿ ತಿಳಿಸಿದ್ದಾರೆ.
ಮತ್ತೊಂದು ಪ್ರಶ್ನೆಗೆ ಉತ್ತರ ನೀಡಿರುವ ಗಡ್ಕರಿ, ‘ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ, ನಿರ್ವಹಣೆಗೆ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯವೇ ಜವಾಬ್ದಾರಿ’ ಎಂದಿದ್ದಾರೆ.