ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಕ್ರಮ ಗಣಿಗಾರಿಕೆ ಪ್ರಕರಣ: ಸಿಬಿಐಗೆ ಲಿಖಿತ ಪ್ರತಿಕ್ರಿಯೆ ಸಲ್ಲಿಸಿದ ಅಖಿಲೇಶ್‌

Published 29 ಫೆಬ್ರುವರಿ 2024, 14:40 IST
Last Updated 29 ಫೆಬ್ರುವರಿ 2024, 14:40 IST
ಅಕ್ಷರ ಗಾತ್ರ

ಲಖನೌ: ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ನೀಡಿದ್ದ ಸಮನ್ಸ್‌ಗೆ ಲಿಖಿತ ಪ್ರತಿಕ್ರಿಯೆ ಸಲ್ಲಿಸಿರುವುದಾಗಿ ಸಮಾಜವಾದಿ ಪಕ್ಷದ ಅಧ್ಯಕ್ಷ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌ ಅವರು ಗುರುವಾರ ತಿಳಿಸಿದ್ದಾರೆ. 

ಇಲ್ಲಿನ ಸಮಾಜವಾದಿ ಪಕ್ಷದ ಕಚೇರಿಯಲ್ಲಿ ನಡೆದ ಪಿಡಿಎ (ಪಿಚ್ಡಾ– ಹಿಂದುಳಿದ ವರ್ಗಗಳು, ಡಿ– ದಲಿತ ಮತ್ತು ಎ–ಅಲ್ಪಸಂಖ್ಯಾತ) ಸಭೆಯಲ್ಲಿ ಭಾಗವಹಿಸಿದ್ದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು.

ಬಿಜೆಪಿಯ ಘಟಕದಂತೆ ಸಿಬಿಐ ಕಾರ್ಯ ನಿರ್ವಹಿಸುತ್ತಿದೆ ಎಂದು ವಾಗ್ದಾಳಿ ನಡೆಸಿದ ಅವರು, ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ ಜನರು ಕೇಂದ್ರದ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಲಿದ್ದಾರೆ ಎಂದರು.

ಇದಕ್ಕೂ ಮುನ್ನ ‘ಎಕ್ಸ್‌’ನಲ್ಲಿ ಪ್ರತಿಕ್ರಿಯಿಸಿದ್ದ ಅವರು, ‘ಬಿಜೆಪಿಗೆ ಎಸ್‌ಪಿಯೇ ಪ್ರಮುಖ ಗುರಿಯಾಗಿದೆ. 2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕೆಲ ವಿಷಯಗಳಿಗೆ ಸಂಬಂಧಿಸಿದಂತೆ ನನಗೆ ನೋಟಿಸ್‌ ಬಂದಿತ್ತು. ಈಗ ಮತ್ತೆ ಚುನಾವಣೆ ಸಮೀಪಿಸುತ್ತಿರುವುದರಿಂದ ಇನ್ನೊಮ್ಮೆ ನೋಟಿಸ್‌ ಬಂದಿದೆ’ ಎಂದಿದ್ದರು.

‘ಚುನಾವಣೆ ಬಂದಾಗ ನೋಟಿಸ್‌ ಬರುತ್ತದೆ ಎಂಬುದು ನನಗೆ ಗೊತ್ತು. ಹೀಗಾಗಿ ಆತಂಕ ಏಕೆ? 10 ವರ್ಷಗಳಲ್ಲಿ ನೀವು (ಬಿಜೆಪಿ) ಸಾಕಷ್ಟು ಕೆಲಸಗಳನ್ನು ಮಾಡಿದ್ದರೆ, ಏಕೆ ನರ್ವಸ್‌ ಆಗಿದ್ದೀರಿ’ ಎಂದು ಅವರು ಪ್ರಶ್ನಿಸಿದ್ದರು.

2019ರಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಆರ್‌ಪಿಸಿ ಸೆಕ್ಷನ್‌ 160ರ ಅಡಿಯಲ್ಲಿ ಪ್ರಕರಣದ ವಿಚಾರಣೆಗೆ ಫೆ. 29ರಂದು ಹಾಜರಾಗುವಂತೆ ಸಿಬಿಐ ನೋಟಿಸ್‌ ನೀಡಿತ್ತು.  ಇ–ಟೆಂಡರ್‌ ಪ್ರಕ್ರಿಯೆಯನ್ನು ಉಲ್ಲಂಘಿಸಿ ಗಣಿಗಾರಿಕೆಯ ಗುತ್ತಿಗೆಗಳನ್ನು ನೀಡಿರುವ ಕುರಿತ ಪ್ರಕರಣ ಇದಾಗಿದ್ದು, ಅಲಹಾಬಾದ್‌ ಹೈಕೋರ್ಟ್‌ ಆದೇಶದ ಮೇರೆಗೆ ತನಿಖೆ ನಡೆಯುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT