ನವದೆಹಲಿ: ಅರುಣಾಚಲ ಪ್ರದೇಶದ ಕೆಲವು ಸ್ಥಳಗಳಿಗೆ ಚೀನಿ ಹೆಸರುಗಳನ್ನು ನಾಮಕಾರಣ ಮಾಡಿರುವ ಚೀನಾದ ನಡೆಯನ್ನು ಕೇಂದ್ರ ಸರ್ಕಾರವು ‘ಅವಿವೇಕದ ಧೋರಣೆ’ ಎಂದಿದ್ದು, ಮಂಗಳವಾರ ಖಂಡತುಂಡವಾಗಿ ತಿರಸ್ಕರಿಸಿದೆ.
‘ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಅಂಗ. ಅದು ಯಾವಾಗಲೂ ದೇಶದ ಭಾಗವೇ ಆಗಿರಲಿದೆ. ಚೀನಾ ದೇಶವು ಇಲ್ಲಿನ ಪ್ರದೇಶಗಳಿಗೆ ಹೊಸ ಹೆಸರುಗಳನ್ನು ಇಡುವ ಮೂಲಕ ವಾಸ್ತವವನ್ನು ಬದಲಿಸಲು ಸಾಧ್ಯವಿಲ್ಲ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಪ್ರತಿಕ್ರಿಯಿಸಿದ್ದಾರೆ.
ಅರುಣಾಚಲ ಪ್ರದೇಶದ ವಿವಿಧ ಸ್ಥಳಗಳಿಗೆ 30 ಹೊಸ ಹೆಸರಿರುವ ನಾಲ್ಕನೇ ಪಟ್ಟಿಯನ್ನು ಚೀನಾ ಬಿಡುಗಡೆ ಮಾಡಿದ ಬೆನ್ನಲ್ಲೇ ಈ ಹೇಳಿಕೆ ನೀಡಿದ್ದಾರೆ.
‘ಅರುಣಾಚಲ ಪ್ರದೇಶದ ಸ್ಥಳಗಳ ಹೆಸರುಗಳನ್ನು ಮರುನಾಮಕರಣ ಮಾಡುವ ಅವಿವೇಕದ ಪ್ರಯತ್ನಕ್ಕೆ ಚೀನಾ ಕಟ್ಟುಬಿದ್ದಿದೆ. ಇಂಥ ಪ್ರಯತ್ನಗಳನ್ನು ಭಾರತ ನಿರ್ಭಿಡೆಯಿಂದ ತಿರಸ್ಕರಿಸುತ್ತದೆ’ ಎಂದು ಹೇಳಿದ್ದಾರೆ.
ಜೈಶಂಕರ್ ವಿರೋಧ: ‘ಅರುಣಾಚಲ ಪ್ರದೇಶವು ಯಾವಾಗಲೂ ಭಾರತದ ರಾಜ್ಯವಾಗಿಯೇ ಇರಲಿದೆ. ಹೆಸರು ಬದಲಾವಣೆಯಿಂದ ಚೀನಾ ಏನನ್ನೂ ಪಡೆದುಕೊಳ್ಳಲಾಗುವುದಿಲ್ಲ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಸೋಮವಾರ ಸೂರತ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು.
‘ನಾನು ನಿಮ್ಮ ಮನೆಯ ಹೆಸರನ್ನು ಬದಲಾಯಿಸಿದರೆ ಅದು ನನ್ನ ಮನೆಯಾಗುತ್ತದೆಯೇ? ಹಾಗೆಯೇ ಅರುಣಾಚಲ ಪ್ರದೇಶ ಭಾರತದ ಭಾಗವಾಗಿರಲಿದೆ’ ಎಂದು ತಿಳಿಸಿದ್ದಾರೆ.