ಬಾರ್ಮೇರ್: ರಾಜಸ್ಥಾನ ಚುನಾವಣೆಗೆ ಕೆಲವೇ ದಿನಗಳಿರುವಾಗ, ಬಿಜೆಪಿ ಹಿರಿಯ ನಾಯಕ ಜಸ್ವಂತ್ ಸಿಂಗ್ ಅವರ ಮಗ ಮಾನವೇಂದ್ರ ಸಿಂಗ್ ಅವರು ಪಕ್ಷ ತೊರೆದಿದ್ದಾರೆ. ತಮ್ಮ ಕ್ಷೇತ್ರದಲ್ಲಿ ಸ್ವಾಭಿಮಾನ ರ್ಯಾಲಿ ನಡೆಸಿದ ಅವರು, ‘ಬಿಜೆಪಿ ಸೇರಿದ್ದು ತಾವು ಮಾಡಿದ ತಪ್ಪು’ ಎಂದಿದ್ದಾರೆ.
2014ರ ಲೋಕಸಭಾ ಚುನಾವಣೆಯಲ್ಲಿ ಜಸ್ವಂತ್ ಸಿಂಗ್ ಅವರಿಗೆ ಟಿಕೆಟ್ ನಿರಾಕರಿಸಲಾಗಿತ್ತು. ಈ ವೇಳೆ ಮಾನವೇಂದ್ರ ಸಿಂಗ್ ಬಿಜೆಪಿ ಸೇರಿದ್ದರು. ‘ಬಾರ್ಮೇರ್ ಟಿಕೆಟ್ ವಿಚಾರದಲ್ಲಿ ಏನಾಗಿದೆಯೋ ಅದರ ಬಗ್ಗೆ ಬೇಸರವಿದೆ. ಜೈಪುರದ ವ್ಯಕ್ತಿ ಹಾಗೂ ದೆಹಲಿಯ ಇಬ್ಬರು ಈ ಷಡ್ಯಂತ್ರದ ಹಿಂದೆ ಇದ್ದಾರೆ ಎಂಬುದಾಗಿ ಮೋದಿ ಹೇಳಿದ್ದರು’ ಎಂದು ಮಾನವೇಂದ್ರ ತಿಳಿಸಿದ್ದಾರೆ.
‘ಇದು ಬಾರ್ಮೇರ್ನಿಂದಾಚೆಗೆ ಇರುವ ವಿಷಯ. ಈಗ ಹೊತ್ತಿರುವ ಕಿಡಿಯನ್ನು ಇಡೀ ರಾಜಸ್ಥಾನದಲ್ಲಿ ಹರಡೋಣ’ ಎಂದು ಕಾರ್ಯಕರ್ತರಿಗೆ ಕರೆಕೊಟ್ಟಿರುವ ಸಿಂಗ್, ಮುಖ್ಯಮಂತ್ರಿ ವಸುಂಧರ ರಾಜೇ ಅವರಿಗೆ ಸವಾಲು ಹಾಕಿದ್ದಾರೆ.
ಕಾಂಗ್ರೆಸ್ ಸೇರುವ ಬಗ್ಗೆ ಅವರು ಸ್ಪಷ್ಟನೆ ನೀಡಿಲ್ಲ. ಜನರ ತೀರ್ಮಾನ ಆಧರಿಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.