ಕೊಚ್ಚಿ: ವಯನಾಡಿನ ಅರಣ್ಯದಿಂದ ಸೆರೆಹಿಡಿದಿರುವ ‘ಪಂದಲ್ಲೂರು ಮಾಖ್ನಾ’ (ಪಿ.ಎಂ–2) ಹೆಸರಿನ ಆನೆಯನ್ನು ಮರಳಿ ಕಾಡಿಗೆ ಬಿಡಬೇಕೆಂದು ಕೇರಳ ಹೈಕೋರ್ಟ್ ರಚಿಸಿರುವ ತಜ್ಞರ ಸಮಿತಿ ಸಲಹೆ ನೀಡಿದೆ.
ಆನೆ ತಜ್ಞರಾದ ಡಾ. ಪಿ.ಎಸ್. ಈಸಾ, ಡಾ. ಎಂ. ಆನಂದ ಕುಮಾರ್ ಮತ್ತಿತರರನ್ನೊಳಗೊಂಡ ಸಮಿತಿಯು ಈ ಶಿಫಾರಸು ಮಾಡಿದೆ. ಅರಣ್ಯ ಇಲಾಖೆಯು ಕಳೆದ ವರ್ಷ ಸೆರೆ ಹಿಡಿದಿದ್ದ ಅಂದಾಜು 13 ವರ್ಷ ಪ್ರಾಯದ ಈ ಕಾಡಾನೆ ಸದ್ಯ ಮುತ್ತುಂಗಾ ಆನೆ ಶಿಬಿರದಲ್ಲಿದೆ.
ಆನೆಯ ಚಲನವಲನಗಳ ಮೇಲೆ ನಿಗಾ ವಹಿಸುವ ಸಲುವಾಗಿ ಅದಕ್ಕೆ ರೇಡಿಯೊ ಕಾಲರ್ ಅಳವಡಿಸಬೇಕು ಎಂದೂ ಸಮಿತಿ ಹೇಳಿದೆ.
ಕೇರಳ ಹೈಕೋರ್ಟ್ಗೆ ಈಚೆಗೆ ವರದಿ ಸಲ್ಲಿಸಿರುವ ಸಮಿತಿಯು ಅರಣ್ಯ ಇಲಾಖೆಯ ಕಾರ್ಯವೈಖರಿಯನ್ನು ಟೀಕಿಸಿದೆ. ವಯನಾಡಿನ ಸುಲ್ತಾನ್ ಬತ್ತೇರಿ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದ ಈ ಆನೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆಯು ಅನಗತ್ಯ ಆತುರ ತೋರಿದೆ ಎಂದೂ ಹೇಳಿದೆ.
ಪಂದಲ್ಲೂರು ಪ್ರದೇಶದಲ್ಲಿ ಪಿ.ಎಂ–2 ಆನೆಯು ವ್ಯಕ್ತಿಯೊಬ್ಬರನ್ನು ಕೊಂದಿದೆ ಎಂದು ತಮಿಳುನಾಡಿನ ಅರಣ್ಯ ಇಲಾಖೆಯು ಹೇಳಿತ್ತು.
ಈ ಆನೆಯನ್ನು ಸೆರೆ ಹಿಡಿದಿದ್ದ ತಮಿಳುನಾಡಿನ ಅರಣ್ಯ ಇಲಾಖೆಯು ಬಳಿಕ ಮುದುಮಲೈ ಹುಲಿ ಸಂರಕ್ಷಿತಾರಣ್ಯದ ವ್ಯಾಪ್ತಿಯಲ್ಲಿ ಬಿಟ್ಟಿತ್ತು. ಬಳಿಕ ಇದು ವಯನಾಡಿಗೆ ಬಂದಿತ್ತು.