ನವದೆಹಲಿ: ಉತ್ತರಾಖಂಡದ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ್ನು ಪರಿಸರ ಸೂಕ್ಷ ವಲಯ ಎಂದು ಘೋಷಿಸುವಂತೆ ನಿರ್ದೇಶನ ನೀಡಬೇಕು ಎಂದು ಕೋರಿದ್ದ ಅರ್ಜಿ ಕುರಿತು ಕೇಂದ್ರ ಸರ್ಕಾರ ಪ್ರತಿಕ್ರಿಯೆ ನೀಡಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಪೀಠವು (ಎನ್ಜಿಟಿ) ಕೇಳಿದೆ.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠವು, ಪರಿಸರ, ವನ್ಯಜೀವಿ, ಜೀವವೈವಿಧ್ಯಗಳ ಸಂರಕ್ಷಣೆಗೆ ಇಂಥ ಘೋಷಣೆಯ ಅಗತ್ಯ ಎಂದು ಅಭಿಪ್ರಾಯಪಟ್ಟಿತು.
ಎನ್ಜಿಟಿ ನ್ಯಾಯಪೀಠದ ಮುಖ್ಯಸ್ಥ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾತ್ಸವ ಮತ್ತು ತಜ್ಞ ಸದಸ್ಯ ಎ.ಸೇಂಥಿಲ್ ವೆಲ್ ಅವರು, ‘ಮೂಲ ಅರ್ಜಿಯು ಪರಿಸರ ನಿಯಮಗಳ ಅನುಸರಣೆಗೆ ಸಂಬಂಧಿಸಿದ ಅನೇಕ ವಿಷಯಗಳ ಕುರಿತು ಧ್ವನಿ ಎತ್ತುತ್ತದೆ’ ಎಂದು ಹೇಳಿದರು.
ಈ ಸಂಬಂಧ ಪ್ರತಿಕ್ರಿಯೆ ನೀಡಿಲು ಪ್ರತಿವಾದಿಗಳಿಗೆ ನೋಟಿಸ್ ರವಾನಿಸಲಾಗಿದೆ ಎಂದು ತಿಳಿಸಿದರು.
ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ, ರಾಷ್ಟ್ರೀಯ ವನ್ಯಜೀವಿ ಮಂಡಳಿ, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಮತ್ತು ಉತ್ತರಾಖಂಡ, ಉತ್ತರಪ್ರದೇಶ ಸರ್ಕಾರ ಪ್ರತಿವಾದಿಗಳಾಗಿವೆ.
ಅರ್ಜಿಯ ವಿಚಾರಣೆಯನ್ನು ಮೇ 8ಕ್ಕೆ ಮುಂದೂಡಲಾಗಿದೆ.