ಭದೋಹಿ(ಉತ್ತರ ಪ್ರದೇಶ): ವಯನಾಡಿಗೆ ರಾಹುಲ್ ಗಾಂಧಿ ಅವರ ದಿಢೀರ್ ಭೇಟಿಯಿಂದ ತಾತ್ಕಾಲಿಕವಾಗಿ ಮೊಟಕುಗೊಂಡಿದ್ದ ಭಾರತ್ ಜೋಡೊ ನ್ಯಾಯ ಯಾತ್ರೆ, ಇಂದು ಮಧ್ಯಾಹ್ನ 3 ಗಂಟೆಯಿಂದ ಪುನರಾರಂಭವಾಗಲಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ ತಿಳಿಸಿದ್ದಾರೆ.
ರಾಹುಲ್ ಗಾಂಧಿ ಅವರ ಲೋಕಸಭಾ ಕ್ಷೇತ್ರ ವಯನಾಡಿನಲ್ಲಿ ಕಾಡು ಪ್ರಾಣಿಗಳ ಉಪಟಳ ಹೆಚ್ಚಿದ್ದು, ವಾರದಲ್ಲೇ ಮೂವರು ಮೃತಪಟ್ಟಿದ್ದರು. ಇದರಿಂದ ಆಕ್ರೋಶಗೊಂಡ ಜನರು ಅರಣ್ಯ ಇಲಾಖೆ ವಾಹನಗಳಿಗೆ ಹಾನಿ ಮಾಡಿ ಪ್ರತಿಭಟನೆ ನಡೆಸಿದ್ದರು. ವಿಷಯ ತಿಳಿಯುತ್ತಿದ್ದಂತೆ ಯಾತ್ರೆ ಮೊಟಕುಗೊಳಿಸಿ ವಯನಾಡಿನತ್ತ ಪ್ರಯಾಣ ಬೆಳೆಸಿದ್ದ ರಾಹುಲ್ ಗಾಂಧಿ, ಇಂದು ಬೆಳಿಗ್ಗೆ ಸಂತ್ರಸ್ತರ ಕುಟುಂಬಗಳನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ.
‘ಇಂದಿಗೆ ಭಾರತ್ ಜೋಡೊ ನ್ಯಾಯ ಯಾತ್ರೆ ಪ್ರಾರಂಭವಾಗಿ 35 ದಿನ ಕಳೆದಿದೆ. 36ನೇ ದಿನವಾದ ಇಂದು ಭದೋಹಿಯಿಂದ ಯಾತ್ರೆ ಪ್ರಾರಂಭವಾಗಬೇಕಿತ್ತು. ಆದರೆ ರಾಹುಲ್ ಗಾಂಧಿ ಅವರು ವಯನಾಡಿಗೆ ಭೇಟಿ ನೀಡಿದ್ದರಿಂದ ಅದು ಸಾಧ್ಯವಾಗಲಿಲ್ಲ. ಮಧ್ಯಾಹ್ನ 3 ಗಂಟೆಗೆ ಪ್ರಯಾಗರಾಜ್ನಿಂದ ಯಾತ್ರೆ ಪ್ರಾರಂಭಿಸಲಿದ್ದೇವೆ’ ಎಂದು ಸುದ್ದಿಸಂಸ್ಥೆ ಎಎನ್ಐಗೆ ತಿಳಿಸಿದ್ದಾರೆ.