ಭೋಪಾಲ್: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೋಮವಾರ ಮಧ್ಯಪ್ರದೇಶದ ಇಂದೋರ್ ನಗರದ ಹುಕುಮ್ಚಂದ್ ಮಿಲ್ನ ಕಾರ್ಮಿಕರಿಗೆ ಸೇರಿದ ₹224 ಕೋಟಿಯನ್ನು ಇಂದು ವರ್ಚುವಲ್ ಕಾರ್ಯಕ್ರಮದ ಮೂಲಕ ವಿತರಿಸಲಿದ್ದಾರೆ.
ಕನಕೇಶ್ವರಿ ಮೈದಾನದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯಲಿರುವ 'ಮಜ್ದೂರನ್ ಕಾ ಹಿತ್, ಮಜ್ದೂರನ್ ಕೋ ಸಮರ್ಪಿತ್' ಕಾರ್ಯಕ್ರಮದಲ್ಲಿ ಪ್ರಧಾನಿ ₹224 ಕೋಟಿ ಚೆಕ್ ಹಸ್ತಾಂತರಿಸಲಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಈ ಕಾರ್ಯಕ್ರಮವು ಕಾರ್ಮಿಕರ ಬಹುಕಾಲದ ಬೇಡಿಕೆಗಳ ಈಡೇರಿಕೆಯನ್ನು ಸೂಚಿಸುತ್ತದೆ. ಬಾಕಿ ಪಾವತಿಯಿಂದಾಗಿ 4,800 ಕಾರ್ಮಿಕರು ಪ್ರಯೋಜನ ಪಡೆಯಲಿದ್ದಾರೆ.
1992ರಲ್ಲಿ ಇಂದೋರ್ನಲ್ಲಿನ ಗಿರಣಿ ಮುಚ್ಚಿದ ನಂತರ ಹುಕುಮ್ಚಂದ್ ಮಿಲ್ನ ಕಾರ್ಮಿಕರು ತಮ್ಮ ಬಾಕಿ ಪಾವತಿಗಾಗಿ ಸುದೀರ್ಘ ಕಾನೂನು ಹೋರಾಟ ನಡೆಸಿದ್ದರು. ಮಧ್ಯಪ್ರದೇಶ ಸರ್ಕಾರದ ಉಪಕ್ರಮದ ಮೇರೆಗೆ, ರಾಜ್ಯ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ಮಂಡಳಿ ಮತ್ತು ಕಾರ್ಮಿಕ ಸಂಘಟನೆಗಳು ಒಪ್ಪಂದಕ್ಕೆ ಸಹಿ ಹಾಕಿದ್ದವು. ಪರಿಹಾರದ ಮೊತ್ತವನ್ನು ಡಿಸೆಂಬರ್ 20 ರಂದು ಹೈಕೋರ್ಟ್ನಲ್ಲಿ ಠೇವಣಿ ಇರಿಸಲಾಗಿತ್ತು.
ಇದಲ್ಲದೇ ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರು ₹322 ಕೋಟಿ ವಿವಿಧ ಯೋಜನೆಗಳಿಗೆ ಭೂಮಿಪೂಜೆ ನೆರವೇರಿಸಲಿದ್ದಾರೆ. ಅಲ್ಲದೇ ₹105 ಕೋಟಿ ಪೂರ್ಣಗೊಂಡ ಯೋಜನೆಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.