ಅಯೋಧ್ಯೆ: ಇಲ್ಲಿ ನೂತನವಾಗಿ ನಿರ್ಮಿಸಿರುವ ರಾಮಮಂದಿರಕ್ಕೆ ಒಂದು ತಿಂಗಳ ಅವಧಿಯಲ್ಲಿ, 25 ಕೆ.ಜಿ.ಯ ಚಿನ್ನ ಹಾಗೂ ಬೆಳ್ಳಿ ಆಭರಣಗಳು ಸೇರಿದಂತೆ ಅಂದಾಜು ₹25 ಕೋಟಿ ದೇಣಿಗೆ ಲಭಿಸಿದೆ ಎಂದು ರಾಮ ಮಂದಿರ ಟ್ರಸ್ಟ್ನ ಅಧಿಕಾರಿ ಪ್ರಕಾಶ್ ಗುಪ್ತಾ ಶನಿವಾರ ತಿಳಿಸಿದರು.
ಚೆಕ್, ಡ್ರಾಫ್ಟ್ ಮತ್ತು ನಗದು ರೂಪದಲ್ಲಿ ದೇಣಿಗೆ ಲಭಿಸಿದೆ. ಟ್ರಸ್ಟ್ನ ಬ್ಯಾಂಕ್ ಖಾತೆಗೆ ನೇರವಾಗಿ ಆನ್ಲೈನ್ ವಹಿವಾಟಿನ ಮೂಲಕ ಲಭಿಸಿರುವ ದೇಣಿಗೆಯ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂದೂ ಅವರು ಹೇಳಿದರು.
ಜನವರಿ 23ರಿಂದ ಇದುವರೆಗೆ ಅಂದಾಜು 60 ಲಕ್ಷ ಭಕ್ತರು ದೇಗುಲಕ್ಕೆ ಭೇಟಿ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.
ರಾಮ ನವಮಿಯ ವೇಳೆ ದೇವಾಲಯಕ್ಕೆ 50 ಲಕ್ಷ ಮಂದಿ ಭಕ್ತರು ಭೇಟಿ ನೀಡುವ ನಿರೀಕ್ಷೆ ಇದೆ ಎಂದರು.