ನವದೆಹಲಿ: ‘ಆರ್ಥಿಕವಾಗಿ ಹಿಂದುಳಿದವರಿಗೆ ಉದ್ಯೋಗ, ಶಿಕ್ಷಣದಲ್ಲಿ ಮೀಸಲಾತಿ ಕುರಿತ ರಾಜ್ಯಗಳ ನೀತಿ ರಚನೆಯಲ್ಲಿ ತನ್ನ ಪಾತ್ರ ಇರುವುದಿಲ್ಲ’ ಎಂದು ಕೇಂದ್ರ ಸ್ಪಷ್ಟಪಡಿಸಿದೆ.
‘ಸಂಸತ್ತು ಅಂಗೀಕರಿಸಿರುವ ಸಂವಿಧಾನದ 103ನೇ ತಿದ್ದುಪಡಿ ಕಾಯ್ದೆ ಕೇಂದ್ರ ಮತ್ತು ರಾಜ್ಯಗಳಿಗೆ, ಆರ್ಥಿಕ ವಾಗಿ ಹಿಂದುಳಿದವರಿಗೆ ಶೇ 10ರಷ್ಟು ಮೀಸಲು ಕಲ್ಪಿಸುವ ಅವಕಾಶ ಕಲ್ಪಿಸಲಿದೆ’ ಎಂದೂ ಕೇಂದ್ರ ಸರ್ಕಾರ ಮಂಗಳವಾರ ಸುಪ್ರೀಂ ಕೋರ್ಟ್ಗೆ ಪ್ರಮಾಣಪತ್ರವನ್ನು ಸಲ್ಲಿಸಿದೆ.
‘ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ನೀಡಬೇಕೇ, ಬೇಡವೇ ಎಂಬುದನ್ನು ಸಂವಿಧಾನದ ವಿಧಿ 15(6) ಮತ್ತು 16(6) ಪ್ರಕಾರ ಆಯಾ ರಾಜ್ಯ ಸರ್ಕಾರಗಳೇ ನಿರ್ಧರಿಸಬೇಕು‘ ಎಂದು ಸ್ಪಷ್ಟಪಡಿಸಿದೆ.
ಶೇ 10ರಷ್ಟು ಮೀಸಲಾತಿ ಕಲ್ಪಿಸುವ ಕರ್ನಾಟಕ ಮತ್ತು ತಮಿಳುನಾಡು ಸರ್ಕಾರದ ತೀರ್ಮಾನ ಪ್ರಶ್ನಿಸಿ ವಕೀಲ ಜಿ.ಎಸ್.ಮಣಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.