ಕೋಲ್ಕತ್ತ: 2016ರ ಶಾಲಾ ಉದ್ಯೋಗ ಪ್ರಕರಣದಲ್ಲಿ ಸಿಬಿಐ ಬಂಧಿಸಿರುವ ಮಾಜಿ ಸರ್ಕಾರಿ ಉದ್ಯೋಗಿಗಳ ವಿರುದ್ಧ ಕ್ರಮ ಜರುಗಿಸಲು ಅನುಮತಿ ನೀಡುವ ಬಗ್ಗೆ ಮೇ 2ಕ್ಕೆ ಮೊದಲು ತೀರ್ಮಾನ ಕೈಗೊಳ್ಳುವಂತೆ ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿಗೆ ಕಲ್ಕತ್ತ ಹೈಕೋರ್ಟ್ ಮಂಗಳವಾರ ಸೂಚಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ 25 ಸಾವಿರಕ್ಕೂ ಹೆಚ್ಚಿನ ನೇಮಕಾತಿಗಳನ್ನು ಸೋಮವಾರ ರದ್ದುಪಡಿಸಲಾಗಿದೆ. ಮಂಗಳವಾರದ ಸೂಚನೆಯನ್ನು ಪಾಲಿಸಲು ಮುಖ್ಯ ಕಾರ್ಯದರ್ಶಿ ವಿಫಲರಾದಲ್ಲಿ ಅವರ ವಿರುದ್ಧ ಸೂಕ್ತ ಕ್ರಮಕ್ಕೆ ಕೋರ್ಟ್ ಮುಂದಾಗಬೇಕಾಗುತ್ತದೆ ಎಂದು ವಿಭಾಗೀಯ ಪೀಠವು ಹೇಳಿದೆ.
ಪಶ್ಚಿಮ ಬಂಗಾಳದ ಸರ್ಕಾರಿ ಪ್ರಾಯೋಜಿತ ಮತ್ತು ಅನುದಾನಿತ ಶಾಲೆಗಳ 25,753 ಶಿಕ್ಷಕ ಹಾಗೂ ಶಿಕ್ಷಕೇತರ ಹುದ್ದೆಗಳಿಗೆ ನಡೆದ ನೇಮಕಾತಿಗಳನ್ನು ಇದೇ ಕೋರ್ಟ್ನ ಇನ್ನೊಂದು ವಿಭಾಗೀಯ ಪೀಠವು ಸೋಮವಾರ ರದ್ದುಪಡಿಸಿದೆ.
ಆರೋಪಿಗಳ ವಿರುದ್ಧ ಕಾನೂನು ಕ್ರಮಕ್ಕೆ ಅನುಮತಿ ಕೋರಿ ಸಿಬಿಐ ಸಲ್ಲಿಸಿರುವ ಅರ್ಜಿಯು 2022ರಿಂದಲೂ ಬಾಕಿ ಇದೆ ಎಂದು ಹೇಳಿರುವ ನ್ಯಾಯಮೂರ್ತಿ ಜಯಮಾಲಾ ಬಾಗ್ಚಿ ನೇತೃತ್ವದ ವಿಭಾಗೀಯ ಪೀಠವು, ಮುಖ್ಯ ಕಾರ್ಯದರ್ಶಿಯವರಿಗೆ ಈ ಸೂಚನೆ ನೀಡಿದೆ.